ಮುಂಬೈ:2016ರಲ್ಲಿ ನಡೆಸಿದ್ದ ನಿರ್ದಿಷ್ಟ ದಾಳಿಯಿಂದ (ಸರ್ಜಿಕಲ್ ಸ್ಟ್ರೈಕ್) ಪಾಕಿಸ್ತಾನದ ಭಯೋತ್ಪಾದಕರು ಎದೆಗುಂದಿಲ್ಲ. ಕಾಶ್ಮೀರದಲ್ಲಿ ಭಾರತೀಯ ಯೋಧರು ಉಗ್ರ ದಾಳಿಗಳಲ್ಲಿ ಹತರಾತಗುತ್ತಲೇ ಇದ್ದಾರೆ. ನಿರ್ದಿಷ್ಟ ದಾಳಿಯಿಂದ ಪಾಕ್ ಉಗ್ರರನ್ನು ಧೃತಿಗೆಡಿಸಬಹುದು ಎಂಬುದು ಕೇಂದ್ರ ಸರ್ಕಾದ ಭ್ರಮೆಯಾಗಿತ್ತಷ್ಟೇ ಎಂದು ಶಿವಸೇನಾ ಹೇಳಿದೆ.
ಗಡಿ ಸಮಸ್ಯೆಗಳು ದೇಶದ ಒಳಿತಿಗೆ ಒಳ್ಳೆಯದಲ್ಲ ಎಂದೂ ಅದು ಅಭಿಪ್ರಾಯಪಟ್ಟಿದೆ.
ಜಮ್ಮು–ಕಾಶ್ಮೀರ ಗಡಿಯಲ್ಲಿ ಬುಧವಾರ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ನಾಸಿಕ್ನ ಯೋಧ ಸಂದೀಪ್ ರಘುನಾಥ್ ಸಾವಂತ್ ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಶಿವಸೇನಾ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದೆ.
‘ಕಾಶ್ಮೀರದಲ್ಲಿಹೊಸ ವರ್ಷವು ಸಕಾರಾತ್ಮಕವಾಗಿ ಆರಂಭವಾಗಿಲ್ಲ. ನಮ್ಮ ಸತಾರದ ಯೋಧ ಸಂದೀಪ್ ಸಾವಂತ್ ಇತರ ಯೋಧರೊಂದಿಗೆ ಕಾಶ್ಮೀರದಲ್ಲಿ ಹುತಾತ್ಮರಾಗಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ಮಹಾರಾಷ್ಟ್ರದ ಏಳೆಂಟು ಯೋಧರು ಕರ್ತವ್ಯದ ವೇಳೆ ಹತರಾಗಿದ್ದಾರೆ. ಮಹಾರಾಷ್ಟ್ರದಲ್ಲಿರುವ ‘ಮಹಾ ವಿಕಾಸ್ ಅಘಾಡಿ’ ಸರ್ಕಾರ ಇದಕ್ಕೆ ಹೊಣೆಯಲ್ಲ’ ಎಂದು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಸೇನಾ ಉಲ್ಲೇಖಿಸಿದೆ.
ನಿರ್ದಿಷ್ಟ ದಾಳಿ ಮತ್ತು 370ನೇ ವಿಧಿ ರದ್ದತಿ ಬಳಿಕ ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿದೆಯೇ ಎಂದೂ ಕೇಂದ್ರವನ್ನು ಸೇನಾ ಪ್ರಶ್ನಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.