ಪಟ್ನಾ: ರಾಷ್ಟ್ರೀಯ ಜನತಾ ದಳ(ಆರ್ಜೆಡಿ) ಅಧ್ಯಕ್ಷ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ತಮ್ಮ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯ ಬಳಿಕ ಸಿಂಗಾಪುರದಿಂದ ಭಾರತಕ್ಕೆ ಬರುತ್ತಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರಿಗೆ ಸಿಂಗಾರಪುರದಲ್ಲಿ ಎರಡು ತಿಂಗಳ ಹಿಂದೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆದಿತ್ತು. ಅವರ ಪುತ್ರಿ ರೋಹಿಣಿ ಆಚಾರ್ಯ ಒಂದು ಕಿಡ್ನಿಯನ್ನು ನೀಡಿದ್ದಾರೆ. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಈ ಬಗ್ಗೆ ರೋಹಿಣಿ ಆಚಾರ್ಯ ಭಾವನಾತ್ಮಕ ಟ್ವೀಟ್ ಮಾಡಿದ್ದು, ಅಪ್ಪನನ್ನು ನೋಡಿಕೊಳ್ಳಿ ಎಂದು ಲಾಲು ಪ್ರಸಾದ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
‘ನಮ್ಮ ಗೌರವಾನ್ವಿತ ನಾಯಕ ಲಾಲು ಜೀ ಅವರ ಆರೋಗ್ಯದ ಬಗ್ಗೆ ನಾನು ಮಹತ್ವದ ಘೋಷಣೆ ಮಾಡುತ್ತಿದ್ದೇನೆ. ನಮ್ಮ ತಂದೆ ಫೆಬ್ರುವರಿ 11ರಂದು ಸಿಂಗಾಪುರದಿಂದ ಭಾರತಕ್ಕೆ ಮರಳುತ್ತಿದ್ದಾರೆ. ಅವರ ಆರೋಗ್ಯ ಗುಣುಮುಖರಾದ ಬಳಿಕ ಅವರನ್ನು ಕಳುಹಿಸುತ್ತಿದ್ದೇನೆ. ದಯವಿಟ್ಟು ನನ್ನ ತಂದೆಯನ್ನು ನೋಡಿಕೊಳ್ಳಿ‘ ಎಂದು ರೋಹಿಣಿ ಟ್ವೀಟ್ ಮಾಡಿದ್ದಾರೆ. ಲಾಲು ಪ್ರಸಾದ್ ಅವರ ಜೊತೆ ಇರುವ ಫೋಟೋವನ್ನೂ ರೋಹಿಣಿ ಹಂಚಿಕೊಂಡಿದ್ದಾರೆ.
ಕಿಡ್ನಿ ಕಸಿ ಚಿಕಿತ್ಸೆ ಬಳಿಕ ಅವರು ಸಿಂಗಾಪುರದಲ್ಲಿ ನೆಲೆಸಿರುವ ಪುತ್ರಿ ರೋಹಿಣಿ ಅವರ ಮನೆಯಲ್ಲಿ ನೆಲೆಸಿದ್ದರು. ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಅವರು ಭಾರತಕ್ಕೆ ಮರಳುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.