ಶಿವರಾಜ್ ಸಿಂಗ್ ಚೌಹಾಣ್ (ಸಂಗ್ರಹ ಚಿತ್ರ )
ಚಂಡೀಗಢ: ರೈತ ಮುಖಂಡರ ಜೊತೆ ಸೌಹಾರ್ದಯುತ ವಾತಾವರಣದಲ್ಲಿ ಸಭೆ ನಡೆದಿದೆ, ಮುಂದಿನ ಸಭೆಯು ಚಂಡೀಗಢದಲ್ಲಿ ಮಾರ್ಚ್ 19ರಂದು ನಡೆಯಲಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಒದಗಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸುತ್ತಿರುವ ರೈತರ ಪ್ರತಿನಿಧಿಗಳ ಜೊತೆ ಚೌಹಾಣ್ ನೇತೃತ್ವದ ಕೇಂದ್ರದ ತಂಡವು ಶನಿವಾರ ಮಾತುಕತೆ ನಡೆಸಿತು.
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಮತ್ತು ಪಿಯೂಷ್ ಗೋಯಲ್ ಅವರೂ ಸಭೆಯಲ್ಲಿ ಇದ್ದರು. ‘ನಾವು ರೈತ ಮುಖಂಡರಾದ ಜಗಜೀತ್ ಸಿಂಗ್ ಡಲ್ಲೇವಾಲ್ ಮತ್ತು ಸರವಣ್ ಸಿಂಗ್ ಪಂಡೇರ್ ಅವರ ಮಾತು ಆಲಿಸಿದೆವು. ಒಳ್ಳೆಯ ಚರ್ಚೆ ನಡೆಯಿತು’ ಎಂದು ಚೌಹಾಣ್ ತಿಳಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ನೇತೃತ್ವದಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.