ಜೈಪುರ: ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯ ನಾಥದ್ವಾರದಲ್ಲಿ ನಿರ್ಮಾಣಗೊಂಡಿರುವ 369 ಅಡಿ ಎತ್ತರದ ‘ವಿಶ್ವ ಸ್ವರೂಪಂ’ ಶಿವ ಪ್ರತಿಮೆಯನ್ನು ಶನಿವಾರ ಅನಾವರಣಗೊಳಿಸಲಾಗುತ್ತದೆ.
ಇದು ವಿಶ್ವದ ಅತೀ ಎತ್ತರದ ಪ್ರತಿಮೆ ಎಂದು ಹೇಳಲಾಗಿದೆ. ಆಧ್ಯಾತ್ಮಿಕ ನಾಯಕ ಮೊರಾರಿ ಬಾಪು, ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಮತ್ತು ವಿಧಾನಸಭೆಯ ಸ್ಪೀಕರ್ ಸಿ.ಪಿ.ಜೋಶಿ ಅವರ ಸಮ್ಮುಖದಲ್ಲಿ ಪತ್ರಿಮೆಯು ಅನಾವರಣಗೊಳ್ಳಲಿದೆ.
‘ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ಅ.29ರಿಂದ ನ.6ರವರೆಗೆ 9 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ’ ಎಂದುತತ್ ಪದಮ್ ಸಂಸ್ಥಾನ ಟ್ರಸ್ಟಿ ಮತ್ತು ಮೀರಜ್ ಗ್ರೂಪ್ ಮುಖ್ಯಸ್ಥ ಮದನ್ ಪಾಲಿವಾಲ್ ತಿಳಿಸಿದ್ದಾರೆ.
ಧ್ಯಾನಸ್ಥ ರೂಪದಲ್ಲಿರುವ ಪ್ರತಿಮೆಯು ಉದಯ್ಪುರದಿಂದ 45 ಕಿಲೋಮೀಟರ್ ದೂರದಲ್ಲಿದ್ದು, ತತ್ ಪದಮ್ ಸಂಸ್ಥಾನ ಇದನ್ನು ನಿರ್ಮಿಸಿದೆ. ಈ ಪ್ರತಿಮೆಯು 20 ಕಿ.ಮೀ ದೂರದವರೆಗೆ ಗೋಚರಿಸುತ್ತದೆ. ಇದರ ನಿರ್ಮಾಣಕ್ಕೆ ಮೂರು ಸಾವಿರ ಟನ್ ಉಕ್ಕು ಮತ್ತು ಕಬ್ಬಿಣ,2.5 ಲಕ್ಷ ಕ್ಯೂಬಿಕ್ ಟನ್ ಕಾಂಕ್ರಿಟ್ ಮತ್ತು ಮರಳು ಬಳಕೆಯಾಗಿದೆ. ಈ ಯೋಜನೆಗೆ 2012 ಆಗಸ್ಟ್ನಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.