ಚೆನ್ನೈ: ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಿಗೆ ಇಂದು ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. 6.28 ಕೋಟಿ ಮತದಾರರು ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಗ್ಗೆ 7ರಿಂದ ಮತದಾನ ಆರಂಭವಾಗಿದೆ.
ಬೆಳಗ್ಗೆಯೇ ಚಿತ್ರನಟ ಮತ್ತು ಮಕ್ಕಳ್ನೀಧಿ ಮಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಮಕ್ಕಳ ಜೊತೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಖ್ಯಾತ ನಟ ರಜಿನಿಕಾಂತ್ ಸಹ ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸಿದ್ದಾರೆ.
ಮಕ್ಕಳ್ ನೀಧಿ ಮಯಂ ಅಧ್ಯಕ್ಷ ಮತ್ತು ನಟ ಕಮಲ್ ಹಾಸನ್ ಅವರು ಚೆನ್ನೈನ ತೈನಂಪೇಟೆಯ ಪ್ರೌಢಶಾಲೆಯ ಮತಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ತಂದೆ ಜೊತೆ ಮಕ್ಕಳಾದ ನಟಿ ಶೃತಿ ಹಾಸನ್ ಮತ್ತು ಅಕ್ಷರಾ ಹಾಸನ್ ಸಹ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು. ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಮಲ್ ಹಾಸನ್ ತಮ್ಮದೇ ಪಕ್ಷದ ಮೂಲಕ ಸ್ಪರ್ಧಿಸಿದ್ದಾರೆ.
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಚೆನ್ನೈನ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದ ಸ್ಟೆಲ್ಲಾ ಮೇರಿಸ್ ಕಾಲೇಜಿನಲ್ಲಿ ಮತ ಚಲಾಯಿಸಿದರು.
ಶಿವಗಂಗಾ ಜಿಲ್ಲೆಯ ಕಂದನೂರಿನಲ್ಲಿರುವ ಚಿತ್ತಲ್ ಅಚಿ ಸ್ಮಾರಕ ಪ್ರೌ ಢಶಾಲೆಯ ಮತಕೇಂದ್ರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಮತ ಚಲಾಯಿಸಿದ್ದಾರೆ. ಇದೇವೇಳೆ, ಮಾತನಾಡಿದ ಅವರು, ‘ನಮ್ಮ ಜಾತ್ಯತೀತ, ಪ್ರಗತಿಪರ ಮೈತ್ರಿಕೂಟವು ಭರ್ಜರಿ ಗೆಲುವಿಗೆ ಸಜ್ಜಾಗಿದೆ. ಏಕೆಂದರೆ, ತಮಿಳುನಾಡಿನ ಜನರು ಬದಲಾವಣೆಯನ್ನು ಬಯಸುತ್ತಾರೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.