ಚೆನ್ನೈ: ಜನರ ಕ್ಷೇಮಾಭಿವೃದ್ಧಿಯ ವಿಚಾರವನ್ನು, ಬೇಡುವ ಮಂದಿಗೆ ತಾವು ನೀಡುವ ಭಿಕ್ಷೆ ಎಂಬಂತೆ ಈಗಿನ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ನೋಡುತ್ತಿದ್ದಾರೆ ಎಂದು ನಟ–ರಾಜಕಾರಣಿ ಕಮಲ್ ಹಾಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದಿನ ರಾಜಕಾರಣಿಗಳು ಮತ್ತು ಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅದನ್ನೇ ತಮ್ಮ ಪೂರ್ಣಾವಧಿ ಉದ್ಯೋಗವನ್ನಾಗಿಸಿಕೊಂಡಿವೆ ಎಂದು ಆರೋಪಿಸಿದ್ದಾರೆ.
ಮಕ್ಕಳ್ ನೀದಿ ಮೈಯ್ಯಂ (ಎಂಎನ್ಎಂ) ಪಕ್ಷದ ಸ್ಥಾಪಕರೂ ಆಗಿರುವ ಕಮಲ್, ತಮ್ಮ ಹುಟ್ಟುಹಬ್ಬದ ಅಂಗವಾಗಿ ನೀಡಿರುವ ಸಂದೇಶದಲ್ಲಿ, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ತಮಗೆ ಶುಭಾಶಯ ಕೋರಲು ಬರುವ ಬದಲು ಅಭಿವೃದ್ಧಿ ಕೆಲಸಗಳನ್ನು ಮಾಡುವಂತೆ ಸಲಹೆ ನೀಡಿದ್ದಾರೆ. ಡೆಂಗಿ ಮತ್ತು ಎಚ್1ಎನ್1 ಪೀಡಿತ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರಗಳನ್ನು ಆಯೋಜಿಸುವಂತೆ ತಿಳಿಸಿದ್ದಾರೆ.
ಇದೇ 7ರಂದು ಕಮಲ್ ಅವರ 64ನೇ ಜನ್ಮದಿನ. ತಮ್ಮ ಪಕ್ಷದ ಪ್ರಮುಖ ಗುರಿ ಸ್ವಜನಪಕ್ಷಪಾತದ ರಾಜಕೀಯ ಮತ್ತು ರಾಜಕೀಯ ಪಕ್ಷಗಳು ಅಂಟಿಸಿಕೊಂಡಿರುವ ಅನಗತ್ಯ ವ್ಯಕ್ತಿಪೂಜೆಯನ್ನು ಮಾಡದಿರುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭ್ರಷ್ಟಾಚಾರ ಮುಕ್ತ, ಶೈಕ್ಷಣಿಕ ಸಾಧನೆ, ಕೃಷಿ ಬೆಳೆಗಳಿಗೆ ಸೂಕ್ತ ಬೆಲೆ, ಮಹಿಳೆಯರಿಗೆ ಗೌರವ ಸಿಗುವ ಮತ್ತು ಅಭಿವೃದ್ಧಿಯಲ್ಲಿ ಪಕ್ವತೆಯಿರುವ ರಾಜ್ಯ ಸದ್ಯದಲ್ಲೇ ಹುಟ್ಟಲಿದೆ ಎಂದು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.