ADVERTISEMENT

ಬಾರ್ಜ್‌ ದುರಂತ : ಸಾವಿನ ಸಂಖ್ಯೆ 51ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2021, 18:48 IST
Last Updated 21 ಮೇ 2021, 18:48 IST

ಮುಂಬೈ: ತೌತೆ ಚಂಡಮಾರುತದಿಂದ ಅರಬ್ಬಿ ಸಮುದ್ರದಲ್ಲಿ ಬಾರ್ಜ್‌ ಮುಳುಗಿ ಸಂಭವಿಸಿದ ದುರಂತದಲ್ಲಿ ಸತ್ತವರ ಸಂಖ್ಯೆ 51ಕ್ಕೆ ಏರಿದೆ. ನೌಕಾಪಡೆ ಹಾಗೂ ಕರಾವಳಿ ಗಸ್ತು ಪಡೆಯವರು ಶುಕ್ರವಾರ ಇನ್ನೂ ಎರಡು ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ.

ಬಾರ್ಜ್‌ನಿಂದ ನಾಪತ್ತೆಯಾದ 24 ಮಂದಿ ಮತ್ತು ಆ್ಯಂಕರ್‌ ನಿರ್ವಹಣೆ ದೋಣಿಯಿಂದನಾಪತ್ತೆಯಾದ 11 ಮಂದಿಗಾಗಿ ಶೋಧ ಮುಂದುವರಿದಿದೆ. ಕಳೆದ ಸೋಮವಾರ ಮುಳುಗಡೆಯಾಗಿದ್ದ ಬಾರ್ಜ್‌ನಲ್ಲಿ ಒಟ್ಟು 261 ಜನರಿದ್ದರು. ಅವರಲ್ಲಿ 186 ಮಂದಿಯನ್ನು ರಕ್ಷಿಸಲಾಗಿದೆ. ಆ್ಯಂಕರ್‌ ನಿರ್ವಹಣೆ ದೋಣಿಯಲ್ಲಿದ್ದ 13 ಮಂದಿಯಲ್ಲಿ ಇಬ್ಬರನ್ನು ಮಾತ್ರ ತಕ್ಷಿಸಲಾಗಿದೆ. ಉಳಿದ 11 ಮಂದಿಗಾಗಿ ಶೋಧ ನಡೆದಿದೆ.

ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಿದದರೂ ಈ ಬಾರ್ಜ್‌ ಪ್ರಕ್ಷುಬ್ಧ ಪ್ರದೇಶದಲ್ಲಿ ಉಳಿದದ್ದೇಕೆ ಎಂಬಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸಂತ್ರಸ್ತರ ಕುಟುಂಬಕ್ಕೆ ನೆರವು: ಬಾರ್ಜ್‌ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ₹35‌ ಲಕ್ಷದಿಂದ ಗರಿಷ್ಠ ₹75 ಲಕ್ಷದಷ್ಟು ಪರಿಹಾರ ನೀಡುವುದಾಗಿ ಅಫ್ಕನ್ಸ್‌ ಇಫ್ರಾಸ್ಟ್ರಕ್ಚರ್‌ ಸಂಸ್ಥೆ ಶುಕ್ರವಾರ ತಿಳಿಸಿದೆ. ದುರಂತಕ್ಕೆ ಒಳಗಾಗಿದ್ದ ಬಾರ್ಜ್‌ ಈ ಸಂಸ್ಥೆಗೆ ಸೇರಿದ್ದಾಗಿದೆ.

‘ದುರಂತದಲ್ಲಿ ಜೀವ ಕಳೆದುಕೊಂಡ ನೌಕರರು ಮತ್ತು ಸಿಬ್ಬಂದಿಯ ಬಾಕಿ 10 ವರ್ಷಗಳ ಸೇವಾ ವೇತನ ಮತ್ತು ವಿಮಾ ಪರಿಹಾರವನ್ನು ಇದು ಒಳಗೊಂಡಿದೆ. ಪ್ರತಿ ಕುಟುಂಬಕ್ಕೆ ₹35 ಲಕ್ಷದಿಂದ ₹75 ಲಕ್ಷದವರೆಗೂ ಪರಿಹಾರ ಸಿಗಲಿದೆ’ ಎಂದು ಅಫ್ಕನ್ಸ್‌ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.