ADVERTISEMENT

ಟಿಡಿಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಪಿಟಿಐ
Published 19 ಮಾರ್ಚ್ 2019, 19:53 IST
Last Updated 19 ಮಾರ್ಚ್ 2019, 19:53 IST
ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಪ್ರಚಾರಕ್ಕೆ ಚಾಲನೆ ನೀಡಿದರು
ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಪ್ರಚಾರಕ್ಕೆ ಚಾಲನೆ ನೀಡಿದರು   

ಅಮರಾವತಿ:ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳಿಗೂತೆಲುಗು ದೇಶಂ ಪಾರ್ಟಿ (ಟಿಡಿಪಿ) ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

ಹಾಲಿ ಸಂಸದರಲ್ಲಿ ಹೆಚ್ಚಿನವರಿಗೆ ಮರುಆಯ್ಕೆ ಅವಕಾಶ ನೀಡಲಾಗಿದ್ದು ಕೆಲವು ಕ್ಷೇತ್ರಗಳಲ್ಲಿ ಸಂಸದರ ಕುಟುಂಬದವರಿಗೆ ಟಿಕೆಟ್‌ ನೀಡಲಾಗಿದೆ.

ಕಾಂಗ್ರೆಸ್‌ ತ್ಯಜಿಸಿ ಇತ್ತೀಚೆಗಷ್ಟೇ ಟಿಡಿಪಿ ಸೇರ್ಪಡೆಯಾಗಿರುವ ಕೇಂದ್ರದ ಮೂವರು ಮಾಜಿ ಸಚಿವರಿಗೆ ಟಿಕೆಟ್‌ ನೀಡಲಾಗಿದೆ. ವಿ. ಕಿಶೋರ್‌ಚಂದ್ರ ದೇವ್‌ ಅವರಿಗೆ ಅರಕು ಕ್ಷೇತ್ರದಿಂದ, ಕೋಟ್ಲ ಸೂರ್ಯಪ್ರಕಾಶ ರೆಡ್ಡಿ ಅವರಿಗೆ ಕರ್ನೂಲ್‌ ಹಾಗೂ ಪಿ. ಲಕ್ಷ್ಮಿ ಅವರಿಗೆ ತಿರುಪತಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.

ADVERTISEMENT

ನಂದಮೂರಿ ಬಾಲಕೃಷ್ಣ ಅವರ ಅಳಿಯ ಎಂ. ಭರತ್‌ ವಿಶಾಖಪಟ್ಟಣದಿಂದ ಸ್ಪರ್ಧಿಸಲಿದ್ದಾರೆ. ಇತರ ಪಕ್ಷಗಳೊಡನೆ ಮಾಡಿಕೊಂಡಿರುವ ಕ್ಷೇತ್ರ ಹೊಂದಾಣಿಕೆಯ ಕಾರಣದಿಂದಾಗಿ ರಾಜ್ಯದ ಪಶುಸಂಗೋಪನಾ ಸಚಿವ ಸಿ. ಆದಿನಾರಾಯಣ ರೆಡ್ಡಿ ಅವರು ಈ ಬಾರಿ ವಿಧಾನಸಭೆಯ ಬದಲು, ಕಡಪಾ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಎದುರಿಸಲಿದ್ದಾರೆ.

ಲೋಕಸಭೆಯ ಮಾಜಿ ಸ್ಪೀಕರ್‌ ಜಿ. ಮೋಹನಚಂದ್ರ ಬಾಲಯೋಗಿ ಅವರ ಪುತ್ರ ಹರೀಶ್‌ ಅವರು ಎಸ್‌ಸಿ ಮೀಸಲು ಕ್ಷೇತ್ರ ಅಮಲಾಪುರಂನಿಂದ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವರು. ಅನಂತಪುರಂನ ಹಾಲಿ ಸಂಸದ ಜೆ.ಸಿ. ದಿವಾಕರ ರೆಡ್ಡಿ ಹಾಗೂ ರಾಜಮಹೇಂದ್ರವರಂನ ಸಂಸದ ಮಾಗಂಟಿ ಮುರಳಿ ಮೋಹನ್‌ ಅವರು ಈ ಬಾರಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ. ಹಾಗಾಗಿ, ದಿವಾಕರ್‌ ಅವರ ಪುತ್ರ ಪವನ್‌ ರೆಡ್ಡಿ ಹಾಗೂ ಮುರಳಿ ಮೋಹನ್‌ರ ಸೊಸೆ ಮಾಗಂಟಿ ರೂಪಾ ಅವರಿಗೆ ಆಯಾ ಕ್ಷೇತ್ರಗಳಿಂದ ಟಿಕೆಟ್‌ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.