ಹೈದರಾಬಾದ್:ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಮತ್ತು ಅವರ ಮಗ ನರಾ ಲೋಕೇಶ್ ಸೇರಿ ಪಕ್ಷದ ಹಲವು ಮುಖಂಡರನ್ನು ರಾಜ್ಯ ಸರ್ಕಾರ ಗೃಹಬಂಧನದಲ್ಲಿರಿಸಿದೆ.
ಆಡಳಿತಾರೂಢ ವೈಎಸ್ಆರ್ಸಿಪಿ ಪಕ್ಷ ದ್ವೇಷದ ರಾಜಕಾರಣ ನಡೆಸುತ್ತಿದ್ದು ಟಿಡಿಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಸುಳ್ಳು ಪ್ರಕರಣಗಳನ್ನು ದಾಖಲಿಸಿ ಊರಿನಿಂದ ಹೊರಗಟ್ಟಲಾಗುತ್ತಿದೆ ಎಂದು ನಾಯ್ಡು ಆರೋಪಿಸಿದ್ದಾರೆ. ಇದನ್ನು ವಿರೋಧಿಸಿ ಟಿಡಿಪಿಯು ಗುಂಟೂರ್ನ ಪಲ್ನಾಡು ಪ್ರದೇಶದ ಆತ್ಮಕೂರ್ಗೆ ‘ಚಲೋ ಆತ್ಮಕೂರ್’ ಪ್ರತಿಭಟನೆ ಹಮ್ಮಿಕೊಂಡಿತ್ತು.
ಹಲ್ಲೆ ಮತ್ತು ಸುಳ್ಳು ಪ್ರಕರಣಗಳಿಗೆ ಗುರಿಯಾದ ಸಂತ್ರಸ್ತರ 127 ಕುಟುಂಬಗಳು ಗುಂಟೂರ್ನ ಪರಿಹಾರ ಕೇಂದ್ರಗಳಲ್ಲಿ ವಾಸ್ತವ್ಯ ಹೂಡಿದ್ದಾರೆ ಟಿಡಿಪಿ ಹೇಳಿಕೊಂಡಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಗನ್ ಮೋಹನ್ ರೆಡ್ಡಿ ಸರ್ಕಾರ ಟಿಡಿಪಿ ನಾಯಕರನ್ನು ಗೃಹಬಂಧನದಲ್ಲಿರಿಸಿದೆ. ಕೃಷ್ಣಾ, ಗುಂಟೂರ್ ಮತ್ತು ಪ್ರಕಾಸಂ ಜಿಲ್ಲೆಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.