ADVERTISEMENT

ಉದಯಪುರದ ಹತ್ಯೆ ಆರೋಪಿಗೆ ಬಿಜೆಪಿ ಜೊತೆ ನಂಟಿದೆ: ತೇಜಸ್ವಿ ಯಾದವ್

ಐಎಎನ್ಎಸ್
Published 4 ಜುಲೈ 2022, 11:37 IST
Last Updated 4 ಜುಲೈ 2022, 11:37 IST
ತೇಜಸ್ವಿ ಯಾದವ್: ಪಿಟಿಐ ಚಿತ್ರ
ತೇಜಸ್ವಿ ಯಾದವ್: ಪಿಟಿಐ ಚಿತ್ರ   

ಪಾಟ್ನಾ: ರಾಜಸ್ಥಾನದ ಉದಯಪುರದ ಟೇಲರ್ ಹತ್ಯೆ ಪ್ರಕರಣದ ಆರೋಪಿ ರಿಯಾಜ್ ಅಖ್ತಾರಿ ಬಿಜೆಪಿ ಜೊತೆ ನಂಟು ಹೊಂದಿದ್ದಾರೆ ಎಂದು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ಬಿಜೆಪಿ ನಾಯಕರ ಜೊತೆ ರಿಯಾಜ್ ಕಾಣಿಸಿಕೊಂಡ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ತೇಜಸ್ವಿ ಈ ಆರೋಪ ಮಾಡಿದ್ದಾರೆ.

ಭಾನುವಾರ ರಾತ್ರಿ ಸರಣಿ ಟ್ವೀಟ್ ಮಾಡಿರುವ ಅವರು, ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ಕೆಲವು ಚಿತ್ರಗಳು ಆರೋಪಿಯು ಬಿಜೆಪಿ ನಾಯಕರ ಜೊತೆ ಸಂಪರ್ಕ ಹೊಂದಿದ್ದಾನೆ ಎಂಬುದನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.

ADVERTISEMENT

'ಬಿಜೆಪಿಯೇತರ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯದಲ್ಲಿ ಅಹಿತಕರ ಘಟನೆ ನಡೆದರೆ, ಕೇಂದ್ರವು ತಕ್ಷಣವೇ ಮಧ್ಯಪ್ರವೇಶಿಸಿ ಅದರ ಅಡಿಯಲ್ಲಿ ಬರುವ ಸಂಸ್ಥೆಗಳಿಗೆ ತನಿಖೆಯನ್ನು ಹಸ್ತಾಂತರಿಸುತ್ತದೆ. ಶಾಂತಿ ಕದಡುವ, ಅರಾಜಕತೆ ಸೃಷ್ಟಿಸುವ, ದ್ವೇಷ, ಭಯೋತ್ಪಾದನೆ, ವದಂತಿಗಳನ್ನು ಹಬ್ಬಿಸುತ್ತಿರುವ ‌‌‌ಕೃತ್ಯದಲ್ಲಿ ತೊಡಗಿರುವ ಬಹುಪಾಲು ದೇಶ ವಿರೋಧಿಗಳು ಆರ್‌ಎಸ್‌ಎಸ್ ಮತ್ತು ಬಿಜೆಪಿಯೊಂದಿಗೆ ಪ್ರತ್ಯಕ್ಷ ಅಥವಾ ಪರೋಕ್ಷ ಸಂಪರ್ಕವನ್ನು ಹೊಂದಿದ್ದಾರೆ’ಎಂದು ತೇಜಸ್ವಿ ಟ್ವೀಟ್ ಮಾಡಿದ್ದಾರೆ.

‘ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಯಾವುದೇ ಹಂತಕ್ಕೆ ಹೋಗುತ್ತದೆ’ಎಂದು ತೇಜಸ್ವಿ ಮತ್ತೊಂದು ಟ್ವೀಟ್‌ನಲ್ಲಿ ಕಿಡಿ ಕಾರಿದ್ದಾರೆ.

ಕನ್ಹಯ್ಯ ಲಾಲ್ ಹತ್ಯೆಯಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ನೇರವಾಗಿ ಭಾಗಿಯಾಗಿವೆ ಎಂದು ಜನ ಅಧಿಕಾರ ಪಕ್ಷದ (ಜೆಎಪಿ) ಅಧ್ಯಕ್ಷ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಶನಿವಾರ ಆರೋಪಿಸಿದ್ದರು.

ದಾಳಿಕೋರರಲ್ಲಿ ಒಬ್ಬನಾದ ರಿಯಾಜ್, ರಾಜಸ್ಥಾನದ ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ನಾಯಕ ಮತ್ತು ಮಾಜಿ ಗೃಹ ಸಚಿವ ಗುಲಾಬ್‌ಚಂದ್ ಕಟಾರಿಯಾ ಅವರ ನಿಕಟವರ್ತಿ ಎಂದು ಅವರು ಹೇಳಿದ್ದರು.

ವಿಡಿಯೊ ಹೇಳಿಕೆಯಲ್ಲಿ ಪಪ್ಪು ಯಾದವ್, ಬಿಜೆಪಿ ನಾಯಕರ ಪಾತ್ರ ಮತ್ತು ಕೊಲೆಗಾರನೊಂದಿಗಿನ ಅವರ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಭೀಕರ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

‘ಉದಯಪುರದ ಭೀಕರ ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿ ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಸದಸ್ಯನಾಗಿದ್ದು, ರಾಜಸ್ಥಾನದ ಮಾಜಿ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ಅವರೊಂದಿಗೆ ಭಾವಚಿತ್ರವಿದೆ. ಬಿಜೆಪಿಯ ಪಿತೂರಿ ಮತ್ತು ಇದರ ಹಿಂದೆ ಇರುವವರನ್ನು ಬಯಲಿಗೆಳೆಯಲು ಘಟನೆಯ ಬಗ್ಗೆ ಎಟಿಎಸ್ ತನಿಖೆಗೆ ನಾವು ಒತ್ತಾಯಿಸುತ್ತೇವೆ. ಆರೋಪಿಗಳ ದೂರವಾಣಿ ಸಂಭಾಷಣೆಗಳು ಮತ್ತು ಅವರ ಫೋನ್ ಸ್ಥಳಗಳ ಆಧಾರದ ಮೇಲೆ ತನಿಖೆ ನಡೆಸಬೇಕು. ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು’ಎಂದು ಪಪ್ಪು ಯಾದವ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.