ADVERTISEMENT

ತೆಲಂಗಾಣ ಶಿಕ್ಷಣ ಇಲಾಖೆ ಅವಾಂತರ-ದೋಷಪೂರಿತ ಫಲಿತಾಂಶ,ವಿದ್ಯಾರ್ಥಿಗಳ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 5:36 IST
Last Updated 2 ಜೂನ್ 2019, 5:36 IST
   

ಹೈದರಾಬಾದ್:ತೆಲಂಗಾಣ ರಾಜ್ಯ ಶಿಕ್ಷಣ ಇಲಾಖೆಯ ಅವಾಂತರಗಳಿಂದಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಈ ವಿಷಯ ಈಗ ಹೈಕೋರ್ಟ್ ಮೆಟ್ಟಿಲು ಹತ್ತಿದೆ.

ತೆಲಂಗಾಣ ರಾಜ್ಯ ಶಿಕ್ಷಣ ಮಂಡಳಿ ಪ್ರಕಟಿಸಿರುವಫಲಿತಾಂಶದಲ್ಲಿ, ಕೆಲವು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೂ ಅನುತ್ತೀರ್ಣ ಎಂದೂ, ಅನುತ್ತೀರ್ಣರಾಗಿದ್ದರೂ ಉತ್ತೀರ್ಣ ಎಂದು ಇತ್ತು. ಇದರಿಂದಾಗಿ ತೆಲಂಗಾಣ ರಾಜ್ಯದಲ್ಲಿ ಫಲಿತಾಂಶ ಪ್ರಕಟವಾದ ನಂತರ 25 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶನಿವಾರ ಶಿಕ್ಷಣ ಇಲಾಖೆಯ ಅವಾಂತರದಿಂದಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದೆ ಎಂದು ತಿಳಿದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ, ಆಕೆಯ ಅಂಕಗಳನ್ನು ಮತ್ತೊಮ್ಮೆ ಪರಿಶೀಲಿಸಿದಾಗ ಆಕೆ ತೇರ್ಗಡೆಯಾಗಿದ್ದಳು.

ಸಿಕಂದರಬಾದ್‌‌ನ ಬನ್ಸಿಲಾಲ್ ಪೇಟೆಯಲ್ಲಿ ಈ ಘಟನೆ ನಡೆದಿದೆ. ಅರುತಿಯ ಅನಾಮಿಕ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಇಲ್ಲಿನ ಪ್ರಗತಿ ಮಹಾವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಶನಿವಾರ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಆದರೆ, ಈಕೆ ತೆಲುಗು ಭಾಷಾ ಪತ್ರಿಕೆಯಲ್ಲಿ ಕೇವಲ 20 ಅಂಕಗಳನ್ನು ಪಡೆದಿರುವುದಾಗಿ ಶಿಕ್ಷಣ ಇಲಾಖೆಯ ವೆಬ್ ಸೈಟ್‌‌ನಲ್ಲಿ ಪ್ರಕಟವಾಗಿತ್ತು. ಇದನ್ನು ನೋಡಿದ ಆಕೆ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಳು.ಆಕೆಯ ಸೋದರ ಹಾಗೂ ಸೋದರಿವೆಬ್ ಸೈಟ್‌‌ನಲ್ಲಿ ಪರಿಶೀಲಿಸಿ ಅಂಕಪಟ್ಟಿಯನ್ನು ಡೌನ್ ಲೋಡ್ ಮಾಡಿದಾಗ ಅದರಲ್ಲಿ ತೆಲುಗು ಭಾಷೆಯಲ್ಲಿ 48 ಅಂಕಗಳನ್ನು ಪಡೆದಿರುವುದಾಗಿ ಪ್ರಕಟವಾಗಿತ್ತು.

ತೆಲಂಗಾಣ ಶಿಕ್ಷಣ ಇಲಾಖೆಯಲ್ಲಿ ಈ ರೀತಿಯ ಗೊಂದಲಗಳು ಹಲವು ಬಾರಿ ನಡೆದಿದ್ದರೂ ಇಲಾಖೆ ಎಚ್ಚೆತ್ತುಕೊಂಡಿರಲಿಲ್ಲ. ಈ ಕಾರಣದಿಂದಾಗಿ ತೆಲಂಗಾಣ ಮಕ್ಕಳ ಹಕ್ಕುಗಳ ರಕ್ಷಣಾ ಸಂಘಟನೆ ಹೈಕೋರ್ಟಿನಲ್ಲಿ ಮನವಿ ಸಲ್ಲಿಸಿ ಶಿಕ್ಷಣ ಇಲಾಖೆಯ ಚೆಲ್ಲಾಟದಿಂದಾಗಿ ಮಕ್ಕಳು ಪ್ರಾಣ ಕಳೆದುಕೊಳ್ಳುವಂತಾಗಿದೆ. ಕೂಡಲೆ ಪರಿಹಾರ ಸೂಚಿಸಿ ಎಂದು ಕೋರಿತ್ತು.

ಹೈಕೋರ್ಟ್ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳು ಬರೆದ ಎಲ್ಲಾ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡಿ ಉತ್ತರ ಪತ್ರಿಕೆಗಳನ್ನು ಅಂಕಗಳ ಸಹಿತ ಸ್ಕ್ಯಾನ್ ಮಾಡಿವೆಬ್‌‌ಸೈಟ್‌‌‌‌ನಲ್ಲಿ ಪ್ರಕಟಿಸುವಂತೆ ಆದೇಶಿಸಿದೆ.

ಇದಲ್ಲದೆ, ವಿದ್ಯಾರ್ಥಿಗಳ ಪೋಷಕರು ಬೃಹತ್ ಪ್ರತಿಭಟನೆ ನಡೆಸಿ ತಮ್ಮ ಮಕ್ಕಳಿಗೆ ನ್ಯಾಯದೊರಕಿಸಿಕೊಡುವಂತೆ ಆಗ್ರಹಿಸಿದ್ದರು.

ಈ ಮಧ್ಯೆ ಶಿಕ್ಷಣ ಇಲಾಖೆಯ ಅಧಿಕಾರಿ ಮಧ್ಯರಾತ್ರಿ ವೇಳೆ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಅನಾಮಿಕ ಪಡೆದ ಅಂಕ ಕೇವಲ 21 ಆಗಿದ್ದು, 48 ಅಲ್ಲ, ಕೈತಪ್ಪಿನಿಂದಾಗಿ ಈ ರೀತಿಯ ಪ್ರಮಾದವಾಗಿದೆ. ಅಲ್ಲದೆ, ಮರು ಮೌಲ್ಯಮಾಪನದಲ್ಲಿ ಯಾವುದೇ ವಿದ್ಯಾರ್ಥಿಗಳು ಈ ಮೊದಲು ಪ್ರಕಟಿಸಿರುವ ಅಂಕಗಳಿಗಿಂತ ಹೆಚ್ಚಿನ ಅಂಕ ಪಡೆದಿಲ್ಲ ಎಂದು ತಿಳಿಸಿದ್ದಾರೆ.

ತೆಲಂಗಾಣ ಸರ್ಕಾರ ಆದೇಶ ನೀಡಿ ಉಚಿತವಾಗಿ ಅನುತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನ ಮಾಡಿ ವೆಬ್ ಸೈಟ್ ನಲ್ಲಿ ಪ್ರಕಟಿಸುವಂತೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.