ADVERTISEMENT

ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ಣ: ಪಾಕಿಸ್ತಾನ ಸರ್ಕಾರ

ಪಿಟಿಐ
Published 10 ಆಗಸ್ಟ್ 2021, 6:23 IST
Last Updated 10 ಆಗಸ್ಟ್ 2021, 6:23 IST
ದಾಳಿಯಿಂದ ಹಾನಿಗೊಳಗಾಗಿರುವ ದೇವಾಲಯದ ದೃಶ್ಯ
ದಾಳಿಯಿಂದ ಹಾನಿಗೊಳಗಾಗಿರುವ ದೇವಾಲಯದ ದೃಶ್ಯ   

ಲಾಹೋರ್: ‘ಕಳೆದ ವಾರ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಹಾನಿಗೊಳಗಾದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಪೂರ್ಣಗೊಂಡಿದೆ’ ಎಂದು ಪಾಕಿಸ್ತಾನ ಸರ್ಕಾರ ಸೋಮವಾರ ತಿಳಿಸಿದೆ.

ಎಂಟು ವರ್ಷದ ಹಿಂದೂ ಹುಡುಗ ಮುಸ್ಲಿಂ ಸಮುದಾಯಕ್ಕೆ ಸೇರಿದ ಧಾರ್ಮಿಕ ಶಾಲೆಯೊಂದನ್ನು ಅಪವಿತ್ರಗೊಳಿಸಿದ್ದಾನೆ ಎಂಬ ಕಾರಣಕ್ಕೆ ರಹೀಮ್‌ ಯಾರ್ ಖಾನ್‌ ಜಿಲ್ಲೆಯ ಭೋಂಗ್‌ ಪಟ್ಟಣದಲ್ಲಿರುವ ಹಿಂದೂ ದೇವಾಲಯದ ಮೇಲೆ ನೂರಾರು ಜನರು ಬುಧವಾರ ದಾಳಿ ನಡೆಸಿದ್ದರು.

‘ಮುಸ್ಲಿಂ ಸಮುದಾಯಕ್ಕೆ ಸೇರಿದ ಕೆಲವರು ಶಸ್ತ್ರಾಸ್ತ್ರ, ಬಿದಿರು, ಕೋಲುಗಳೊಂದಿಗೆ ದೇವಸ್ಥಾನ ಮೇಲೆ ದಾಳಿ ನಡೆಸಿ, ಪ್ರತಿಮೆಗಳನ್ನು ವಿರೂಪಗಳಿಸಿದ್ದರು. ಅಲ್ಲದೆ ದೇವಸ್ಥಾನದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್‌ ಅಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಿದ್ದರು’ ಎನ್ನಲಾಗಿತ್ತು.

ADVERTISEMENT

‘ಸರ್ಕಾರವು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸಿ, ಅದನ್ನು ಸ್ಥಳೀಯ ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಿದೆ’ ಎಂದುರಹೀಮ್‌ ಯಾರ್ ಖಾನ್‌ನ ಜಿಲ್ಲಾ ಪೊಲೀಸ್‌ ಅಧಿಕಾರಿ ಆಸಾದ್‌ ಸರ್ಫಾಜ್‌ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

‘ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾದ 90 ಮಂದಿಯನ್ನು ಬಂಧಿಸಲಾಗಿದೆ. ಇದಕ್ಕಾಗಿ ವಿಡಿಯೊ ದೃಶ್ಯಾವಳಿಯ ಸಹಾಯ ಪಡೆಯಲಾಗಿದೆ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿಯನ್ನು ಕೂಡ ವಶಕ್ಕೆ ಪಡೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಸರ್ಕಾರವು ದೇವಸ್ಥಾನದ ಪ್ರತಿಮೆ ನಿರ್ಮಾಣಕ್ಕಾಗಿ ಹೈದರಬಾದ್‌ನಿಂದ ಕಾರ್ಮಿಕರನ್ನು ಕರೆಸಿಕೊಂಡಿತ್ತು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.