ಮಿದ್ನಾಪುರ (ಪಶ್ಚಿಮ ಬಂಗಾಳ) : ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಟೆಂಟ್ ಕುಸಿದು 67 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 13 ಮಹಿಳೆಯರಿದ್ದಾರೆ. ಮೋದಿ ಭಾಷಣ ಮಾಡುತ್ತಿದ್ದಾಗಲೇ ಈ ದುರ್ಘಟನೆ ನಡೆದಿದೆ.
ಸಮಾರಂಭ ನಡೆದ ಮೈದಾನದ ಮುಖ್ಯದ್ವಾರದ ಸಮೀಪದಲ್ಲಿ ಈ ಚಪ್ಪರ ಹಾಕಲಾಗಿತ್ತು. ಟೆಂಟ್ ಕುಸಿಯುತ್ತಿರುವುದನ್ನುಭಾಷಣದ ನಡುವೆಯೇ ಪ್ರಧಾನಿ ಗಮನಿಸಿದರು. ತಮ್ಮ ಬಳಿ ನಿಂತಿದ್ದ ವಿಶೇಷ ರಕ್ಷಣಾ ಪಡೆಯ (ಎಸ್ಪಿಜಿ) ಸಿಬ್ಬಂದಿಯನ್ನು ತಕ್ಷಣವೇ ಅಲ್ಲಿಗೆ ಧಾವಿಸುವಂತೆ ಸೂಚಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಪ್ಪರದ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲು ಎಸ್ಪಿಜಿ ಸಿಬ್ಬಂದಿಗೆ ಪ್ರಧಾನಿಯವರ ಆಪ್ತಸಿಬ್ಬಂದಿ ಮತ್ತು ಬಿಜೆಪಿಯ ಕಾರ್ಯಕರ್ತರು ನೆರವಾದರು. ಪ್ರಧಾನಿಯ ಬೆಂಗಾವಲು ಪಡೆಯಲ್ಲಿದ್ದ ಆಂಬುಲೆನ್ಸ್ನಲ್ಲಿಯೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ, ಮೋದಿ ಅವರು ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿ ಮಾಡಿದರು.
ಚಪ್ಪರ ಕುಸಿದ ಬಳಿಕವೂ ಮೋದಿ ಭಾಷಣ ಮುಂದುವರಿಸಿದರು. ಜನರು ಶಿಸ್ತಿನಿಂದ ವರ್ತಿಸಿದರು ಮತ್ತು ಗಾಯಗೊಂಡವರಿಗೆ ನೆರವಾದವರು ಎಂದು ಅಲ್ಲಿ ಸೇರಿದ್ದವರನ್ನು ಶ್ಲಾಘಿಸಿದರು.
ಗಾಯಗೊಂಡವರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.