ಜೈಪುರ: ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಗ್ರನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಗಂಗಾಪುರ ನಗರದ ನಿವಾಸಿ ಮೊಹಮ್ಮದ್ ಮಿರಾಜುದ್ದೀನ್ (31) ಎಂಬಾತನನ್ನು ಪೊಲೀಸರ ವಿಶೇಷ ತಂಡವು ಬಂಧಿಸಿದೆ ಎಂದು ಎಡಿಜಿಪಿ ದಿನೇಶ್ ಎಂ.ಎನ್. ಶುಕ್ರವಾರ ತಿಳಿಸಿದರು.
ಈತನ ತಲೆಗೆ ₹25 ಸಾವಿರ ಬಹುಮಾನ ಘೋಷಿಸಲಾಗಿತ್ತು. ಮಿರಾಜುದ್ದೀನ್ನನ್ನು ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ವಶಕ್ಕೆ ನೀಡಲಾಗಿದೆ.
2014ರಲ್ಲಿ ದೇಶದಾದ್ಯಂತ ದಾಳಿ ನಡೆಸಲು ಭಯೋತ್ಪಾದಕರ ಗುಂಪು ಯೋಜನೆ ರೂಪಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದಲ್ಲಿ 13 ಮಂದಿ ಉಗ್ರರನ್ನು ಬಂಧಿಸಲಾಗಿತ್ತು. ಇವರಲ್ಲಿ 12 ಮಂದಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು ಎಂದು ದಿನೇಶ್ ವಿವರಿಸಿದರು. ಈ ಪ್ರಕರಣದಲ್ಲಿ ಸಂಚು ರೂಪಿಸಿರುವ ಆರೋಪ ಮಿರಾಜುದ್ದೀನ್ ಮೇಲಿತ್ತು ಎಂದೂ ಹೇಳಿದರು.
ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಜೊತೆಗೆ ನಂಟು ಹೊಂದಿರುವುದಾಗಿ ಮಿರಾಜುದ್ದೀನ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.