ನವದೆಹಲಿ: ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಭಾಗವೆಂದು ಪರಿಗಣಿಸದವರು ಪಂಜಾಬ್ ಕಾಂಗ್ರೆಸ್ನ ಭಾಗವಾಗಿರಬೇಕೇ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಅವರು ಸೋಮವಾರ ಒತ್ತಾಯಿಸಿದ್ದಾರೆ.
ಈ ರೀತಿಯ ಜನರು, ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಹುತಾತ್ಮರನ್ನು ಅಣುಕಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಸಲಹೆಗಾರರಾದ ಮಲ್ವಿಂದರ್ ಸಿಂಗ್ ಮಾಲಿ ಮತ್ತು ಪ್ಯಾರೆಲಾಲ್ ಗರ್ಗ್ ಅವರು ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಮನೀಷ್ ತಿವಾರಿ,‘ಜಮ್ಮು ಮತ್ತು ಕಾಶ್ಮೀರವನ್ನು ನಮ್ಮ ದೇಶದ ಭಾಗವೆಂದು ಪರಿಗಣಿಸದವರು ಮತ್ತು ಪಾಕಿಸ್ತಾನದ ಪರ ಒಲವು ಹೊಂದಿರುವ ವ್ಯಕ್ತಿಗಳು ಪಂಜಾಬ್ ಕಾಂಗ್ರೆಸ್ನ ಭಾಗವಾಗಿ ಇರಬೇಕೇ?. ಈ ಬಗ್ಗೆ ಆತ್ಮಾವಲೋಕನ ಮಾಡುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಅವರನ್ನು ನಾನು ಒತ್ತಾಯಿಸಿದ್ದೇನೆ’ ಎಂದಿದ್ದಾರೆ.
ಇದಕ್ಕೆ ಮೊದಲು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಕೂಡ ಸಿಧು ಅವರ ಸಲಹೆಗಾರರ ಹೇಳಿಕೆಗಳಿಗೆ ಖಂಡನೆ ವ್ಯಕ್ತಪಡಿಸಿದ್ದರು.
‘ಈ ರೀತಿಯ ಹೇಳಿಕೆಗಳು ದೇಶ ಮತ್ತು ರಾಜ್ಯದ ಶಾಂತಿಗೆ ಧಕ್ಕೆ ಉಂಟು ಮಾಡಬಹುದು. ನೀವು ಸಿಧು ಅವರಿಗೆ ಮಾತ್ರ ಸಲಹೆಗಳನ್ನು ನೀಡಿ. ನಿಮಗೆ ತಿಳಿಯದ ವಿಷಯಗಳ ಬಗ್ಗೆ ಹೇಳಿಕೆಗಳನ್ನು ನೀಡಬೇಡಿ’ ಎಂದು ಅಮರಿಂದರ್ ಸಿಂಗ್ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.