ADVERTISEMENT

ದುರುಗುಟ್ಟಿ ನೋಡಿದ ವ್ಯಕ್ತಿ ಕೊಲೆ

ಪಿಟಿಐ
Published 24 ಅಕ್ಟೋಬರ್ 2022, 12:07 IST
Last Updated 24 ಅಕ್ಟೋಬರ್ 2022, 12:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದುರುಗುಟ್ಟಿ ನೋಡಿದ ಕಾರಣ ಶುರುವಾದ ಹೊಡೆದಾಟವು 28 ವರ್ಷ ವಯಸ್ಸಿನ ವ್ಯಕ್ತಿಯ ಹತ್ಯೆ ಮೂಲಕ ಕೊನೆಯಾದ ಪ್ರಕರಣವು ಮುಂಬೈನ ಮಾತುಂಗ ಪ್ರದೇಶದಲ್ಲಿ ಭಾನುವಾರ ನಡೆದಿದೆ.ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಮೃತ ವ್ಯಕ್ತಿ ರೋನಿತ್‌ ಬಾಳೆಕರ್‌ ಕಾಲ್‌ ಸೆಂಟರ್‌ ಉದ್ಯೋಗಿ ಆಗಿದ್ದು, ಘಟನೆ ನಡೆದ ವೇಳೆ ಅಮಲೇರಿದ ಸ್ಥಿತಿಯಲ್ಲಿದ್ದರು. ಅವರ ಜೊತೆ ಅವರ ಸ್ನೇಹಿತರೊಬ್ಬರಿದ್ದರು. ಮೂವರು ಆರೋಪಿಗಳಲ್ಲಿ ಒಬ್ಬನನ್ನು ರೋನಿತ್‌ ದುರುಗುಟ್ಟಿ ನೋಡಿದ್ದರಿಂದ ಅವರ ಮಧ್ಯೆ ಹೊಡೆದಾಟ ಆರಂಭವಾಯಿತು. ಆರೋಪಿಗಳು ರೋನಿತ್‌ ತಲೆಗೆ ಬೆಲ್ಟ್‌ನಿಂದ ಬಲವಾಗಿ ಹೊಡೆದಿದ್ದಾರೆ. ಹಲವಾರು ಬಾರಿ ಅವರ ಎದೆ, ಹೊಟ್ಟೆಗೆ ಬಲವಾಗಿ ಗುದ್ದಿದ್ದಾರೆ. ಎರಡು ಬಾರಿ ನೆಲಕ್ಕೆ ನೂಕಿದ್ದಾರೆ. ಬಳಿಕ ರೋನಿತ್‌ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಮೊಕದ್ದಮೆ ದಾಖಲಿಸಲಾಗಿದೆ. ಭಾನುವಾರ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮೂರು ದಿನಗಳ ಕಾಲ ಅವರನ್ನುಪೊಲೀಸ್‌ ವಶದಲ್ಲಿ ಇರಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.