ADVERTISEMENT

ಕೋವಿಡ್‌-19 ಮೂರನೇ ಅಲೆ: ಮುಂಜಾಗ್ರತಾ ಕ್ರಮಕ್ಕೆ ಮಹಾರಾಷ್ಟ್ರ ಸಿಎಂ ಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜೂನ್ 2021, 14:47 IST
Last Updated 24 ಜೂನ್ 2021, 14:47 IST
   

ಮುಂಬೈ: ಕೋವಿಡ್‌-19 ಮೂರನೇ ಅಲೆಯ ಭೀತಿ ಇರುವುದರಿಂದ ಎಲ್ಲ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಆರೋಗ್ಯ ಇಲಾಖೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸೂಚಿಸಿದ್ದಾರೆ.

ರಾಯಗಡ, ರತ್ನಗಿರಿ, ಸಿಂಧೂದುರ್ಗ, ಸತಾರ, ಸಾಂಗ್ಲಿ, ಕೊಲ್ಹಾಪುರ ಮತ್ತು ಹಿಂಗೋಲಿ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಭೆ ನಡೆಸಿದ್ದಾರೆ. ಈ ವೇಳೆ ಆರೋಗ್ಯ ಸಚಿವ ರಾಜೇಶ್‌ ಟೋಪೆ ಅವರೂ ಇದ್ದರು ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಪ್ರಕಟಿಸಿದ್ದಾರೆ.

ರಾಜೇಶ್‌ ಅವರು ಏಳು ಜಿಲ್ಲೆಗಳಲ್ಲಿ ಕೊರೊನಾವೈರಸ್‌ನ ರೂಪಾಂತರ 'ಡೆಲ್ಟಾ ಪ್ಲಸ್‌' ಸೋಂಕಿನ 21 ಪ್ರಕರಣಗಳು ವರದಿಯಾಗಿವೆ ಎಂದು ಬುಧವಾರ ತಿಳಿಸಿದ್ದರು.

ADVERTISEMENT

'ರಾಜ್ಯದ ಏಳು ಜಿಲ್ಲೆಗಳಲ್ಲಿ 'ಡೆಲ್ಟಾ ಪ್ಲಸ್‌' ಸೋಂಕಿನ 21 ಪ್ರಕರಣಗಳು ವರದಿಯಾಗಿವೆ. ಸೋಂಕಿತರನ್ನು ಪ್ರತ್ಯೇಕವಾಸದಲ್ಲಿರಿಸಿದ್ದೇವೆ. ಜೊತೆಗೆ ಪ್ರಯಾಣ ಹಾಗೂ ಸಂಪರ್ಕಕ್ಕೆ ಬಂದವರ ವಿವರಗಳನ್ನು ಸಂಗ್ರಹಿಸಿ ಪತ್ತೆ ಹಚ್ಚುತ್ತಿದ್ದೇವೆ. ವೈರಸ್‌ನ ರಚನೆಯ ಅಧ್ಯಯನಕ್ಕಾಗಿ ಎಲ್ಲರ ಮಾದರಿಯನ್ನು ಕಳುಹಿಸಿಕೊಡಲು ನಿರ್ಧರಿಸಿದ್ದೇವೆ. ಡೆಲ್ಟಾ ಪ್ಲಸ್‌ ರೂಪಾಂತರದಿಂದ ಯಾವುದೇ ಸಾವು ಈವರೆಗೆ ಸಂಭವಿಸಿಲ್ಲ. ಗುಣಲಕ್ಷಣ ಮೊದಲಿನಂತೆಯೇ ಇದ್ದು, ಚಿಕಿತ್ಸೆಯನ್ನೂ ಹಾಗೆಯೇ ಮುಂದುವರಿಯುತ್ತಿದೆ. ಯಾವುದೇ ಮಕ್ಕಳಿಗೆ ರೂಪಾಂತರ ಸೋಂಕು ತಗುಲಿಲ್ಲ' ಎಂದು ಮಾಹಿತಿ ನೀಡಿದ್ದರು.

ಭಾರತದಲ್ಲಿ ಈವರೆಗೆ40 ಡೆಲ್ಟಾ ಪ್ಲಸ್‌ ಪ್ರಕರಣಗಳು ಪತ್ತೆಯಾಗಿದ್ದು, ಹೆಚ್ಚು ಪ್ರಕರಣಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ ಮತ್ತು ತಮಿಳುನಾಡಿನಲ್ಲಿವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.