ನವದೆಹಲಿ: ‘ಕೋವಿಡ್ ಮೂರನೇ ಅಲೆಯ ಸಿದ್ಧತೆಯ ಭಾಗವಾಗಿ 5,000 ಯುವಕರನ್ನು ಆರೋಗ್ಯ ಸಹಾಯಕರಾಗಿ ತರಬೇತಿ ನೀಡಲು ನಿರ್ಧರಿಸಲಾಗಿದೆ’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ ತಿಳಿಸಿದರು.
‘ವೈದ್ಯರು ಮತ್ತು ದಾದಿಯರಿಗೆ ನೆರವಾಗುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಯುವ ಅಭ್ಯರ್ಥಿಗಳಿಗೆ ಆರೋಗ್ಯ ಸಹಾಯಕರು ಅಥವಾ ಸಮುದಾಯ ಶೂಶ್ರೂಷಕರಾಗಿ ಎರಡು ವಾರಗಳ ಕಾಲ ತರಬೇತಿಯನ್ನು ನೀಡಲಾಗುವುದು. ಪ್ರತಿ ಬ್ಯಾಚ್ನಲ್ಲಿ 500 ಅಭ್ಯರ್ಥಿಗಳಿರಲಿದ್ದು, ಜೂನ್ 28 ರಿಂದ ತರಬೇತಿ ಪ್ರಾರಂಭವಾಗಲಿದೆ’ ಎಂದು ಅವರು ಹೇಳಿದರು.
‘ಅಭ್ಯರ್ಥಿಗಳು ಕಡ್ಡಾಯವಾಗಿ 12ನೇ ತರಗತಿ ಉತೀರ್ಣರಾಗಿರಬೇಕು ಮತ್ತು 18 ವರ್ಷ ಮೇಲ್ಪಟ್ಟವರಾಗಿರಬೇಕು. ಆನ್ಲೈನ್ ಅರ್ಜಿಗಳನ್ನು ಜೂನ್ 17ರಿಂದ ಆಹ್ವಾನಿಸಲಾಗುವುದು. ಮೊದಲು ಅರ್ಜಿ ಸಲ್ಲಿಸಿದವರಿಗೆ, ಮೊದಲ ಆದ್ಯತೆ’ ಎಂದು ಮಾಹಿತಿ ನೀಡಿದರು.
‘ಮೂರನೇ ಅಲೆಯ ವೇಳೆ ಅಗತ್ಯವಿದ್ದಾಗ ಆರೋಗ್ಯ ಸಹಾಯಕರನ್ನು ಸೇವೆಗೆ ಕರೆಸಿಕೊಳ್ಳುತ್ತೇವೆ. ಕೆಲಸ ಮಾಡಿದ ದಿನಕ್ಕೆ ಅನುಗುಣವಾಗಿ ಅವರಿಗೆ ವೇತನ ನೀಡಲಾಗುವುದು’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.