ಮುಜಾಫರ್ನಗರ (ಉತ್ತರ ಪ್ರದೇಶ): ದೆಹಲಿ-ಉತ್ತರ ಪ್ರದೇಶದ ಗಡಿಯಲ್ಲಿರುವ ಗಾಜಿಪುರದಲ್ಲಿ ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕಿಸಾನ್ ಒಕ್ಕೂಟವನ್ನು (ಬಿಕೆಯು) ಬೆಂಬಲಿಸಿ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ 'ಮಹಾಪಂಚಾಯತ್'ನಲ್ಲಿ 10 ಸಾವಿರದಷ್ಟು ರೈತರು ಭಾಗವಹಿಸಿ ಬೆಂಬಲ ಸೂಚಿಸಿದರು.
ಗಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸ್ಥಳವನ್ನು ಖಾಲಿ ಮಾಡುವಂತೆ ಗುರುವಾರ ರಾತ್ರಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ಬೇಡಿಕೆ ಈಡೇರುವ ವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಘೋಷಿಸಿದ್ದ ಬಿಕೆಯು ಮುಖಂಡ ರಾಕೇಶ್ ತಿಕಾಯತ್, ಭಾವುಕರಾಗಿದ್ದರು.
ಪೊಲೀಸರು ಬಲ ಪ್ರಯೋಗಿಸಿ ಪ್ರತಿಭಟನಾಕಾರರನ್ನು ತೆರುವುಗೊಳಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುಜಾಫರ್ನಗರದಲ್ಲಿ ನಡೆದ ಮಹಾಪಂಚಾಯತ್ನಲ್ಲಿ ಭಾರಿ ಸಂಖ್ಯೆಯಲ್ಲಿ ರೈತರು ಒಗ್ಗೂಡಿದರು.
ಪ್ರತಿಭಟನಾಕಾರರನ್ನು ಬೆಂಬಲಿಸಿದ ರೈತರು, ತ್ರಿವರ್ಣ ಧ್ವಜ ಹಾಗೂ ಕೃಷಿ ಧ್ವಜಗಳೊಂದಿಗೆ ನೂರಾರು ಸಂಖ್ಯೆಯ ಟ್ರ್ಯಾಕ್ಟರ್ಗಳಲ್ಲಿ ಪಾಲ್ಗೊಂಡರು.
ರಾಷ್ಟ್ರೀಯ ಲೋಕದಳದ (ಆರ್ಎಲ್ಡಿ) ಅಧ್ಯಕ್ಷ ಅಜಿತ್ ಸಿಂಗ್ ಕೂಡಾ ಬಿಕೆಯುಗೆ ಬೆಂಬಲ ಘೋಷಿಸಿದರು. ಅವರ ಪುತ್ರ ಜಯಂತ್ ಚೌಧರಿ ಸಹ ಮಹಾಪಂಚಾಯತ್ನಲ್ಲಿ ಭಾಗವಹಿಸಿದರು.
ದಿಗ್ಗಜ ರೈತ ಮುಖಂಡ ಮಹೇಂದ್ರ ಸಿಂಗ್ ಟಿಕಾಯತ್ ಮಕ್ಕಳಾಗಿರುವ ರಾಕೇಶ್ ಟಿಕಾಯತ್ ಮತ್ತು ಮಹೇಂದ್ರ ಸಿಂಗ್ ತಿಕಾಯತ್, ಬಿಕೆಯು ರೈತ ಚಳವಳಿಯನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.