ಶ್ರೀನಗರ: ಇಲ್ಲಿನ ಹೊರವಲಯದ ಪಂತಚೌಕ್ ಬಳಿ ಶುಕ್ರವಾರ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದು, ಸಿಆರ್ಪಿಎಫ್ ಯೋಧ ಸೇರಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
‘ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ನಡೆದ ಪರಸ್ಪರ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದಾರೆ. ಈ ಮೂವರ ಪೈಕಿ ಒಬ್ಬನ ಗುರುತು ಪತ್ತೆಯಾಗಿದ್ದು, ಆತನನ್ನು ಜೈಶೆ–ಮೊಹಮ್ಮದ್ ಸಂಘಟನೆಯ ಸುಹೇಲ್ ಅಹ್ಮದ್ ರಾಥರ್ ಎಂದು ಗುರುತಿಸಲಾಗಿದೆ. ಈತ ಝವಾನ್ ಪ್ರದೇಶದ ದಾಳಿಯಲ್ಲಿ ಭಾಗಿಯಾಗಿದ್ದ’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಪೊಲೀಸ್, ಸೇನೆ ಹಾಗೂ ಸಿಆರ್ಪಿಎಫ್ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ಉಗ್ರರು ಭದ್ರತಾಪಡೆಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು. ಘಟನೆಯಲ್ಲಿ ಮೂವರು ಪೊಲೀಸರು ಹಾಗೂ ಸಿಆರ್ಪಿಎಫ್ ಯೋಧ ಗಾಯಗೊಂಡರು. ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ’ ಎಂದು ಹೇಳಿದರು.
ಹೈಬ್ರಿಡ್ ಉಗ್ರರು ಹೊಸ ಸವಾಲು: ‘ಹಿರಿಯ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಗಿಲಾನಿ ಅವರ ಹತ್ಯೆಯು ಈ ವರ್ಷದ ಭದ್ರತಾ ಪಡೆಗಳ ಪ್ರಮುಖ ಸಾಧನೆಯಾಗಿದ್ದು, 2022ರಲ್ಲಿ ’ಹೈಬ್ರಿಡ್’ ಉಗ್ರರುಭದ್ರತಾ ಪಡೆಗಳಿಗೆ ಹೊಸ ಸವಾಲಾಗಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.
17ರ ಆಸುಪಾಸಿನ ಸ್ಥಳೀಯ ಯುವಕರು ಉಗ್ರ ಪಡೆ ಸೇರುತ್ತಿದ್ದು,ಈ ಹೊಸ ಮಾದರಿಯ ಉಗ್ರರನ್ನು ‘ಹೈಬ್ರಿಡ್ ಉಗ್ರರು’ ಎಂದು ಕರೆಯಲಾಗುತ್ತಿದೆ.ಈ ಹೈಬ್ರಿಡ್ ಉಗ್ರರು ಪೊಲೀಸ್ ಹಾಗೂ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಹೈಬ್ರಿಡ್ ಉಗ್ರ ಪಡೆ ಸೇರಿದ ಸ್ಥಳೀಯ ಯುವಕರ ಪೂರ್ವಪರ ಯಾವುದೇ ಮಾಹಿತಿಗಳು ಪೊಲೀಸರ ಬಳಿ ಇಲ್ಲದಿರುವುದು ಹೊಸ ತಲೆನೋವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.