ಕೋಲ್ಕತ್ತ (ಪಿಟಿಐ): ಪಶ್ಚಿಮಬಂಗಾಳದ ಅಸನ್ಸೋಲ್ ಸ್ಥಳೀಯ ಸಂಸ್ಥೆಗೆ ಕೇಂದ್ರದ ಅನುದಾನ ಸಿಗದಂತೆ ವಂಚಿಸಲಾಗಿದೆ ಎಂದು ಟಿಎಂಸಿ ಮುಖಂಡರೊಬ್ಬರೇ, ಪಕ್ಷ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸ್ಥಳೀಯ ಸಂಸ್ಥೆಯ ಅಧ್ಯಕ್ಷ, ಟಿಎಂಸಿ ಮುಖಂಡ ಜಿತೇಂದ್ರ ತಿವಾರಿ ಅವರು, ಪೌರಾಡಳಿತ ಸಚಿವ ಫಿರ್ಹಾದ್ ಹಕೀಂ ಅವರಿಗೆ ಪತ್ರ ಬರೆದಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಗಾಗಿ ಪಟ್ಟಣಗಳನ್ನು ಆಯ್ಕೆ ಮಾಡುವಲ್ಲಿ ರಾಜ್ಯ ಸರ್ಕಾರದ ಲೋಪದಿಂದಾಗಿ ಅಸನ್ಸೋಲ್ ಸ್ಥಳೀಯ ಸಂಸ್ಥೆಗೆ ₹ 2000 ಅನುದಾನ ಸಿಗುವುದು ತಪ್ಪಿದೆ ಎಂದು ದೂರಿದ್ದಾರೆ.
ಕೇಂದ್ರವು ಅಸನ್ಸೋಲ್ ಪಟ್ಟಣವನ್ನು ಆಯ್ಕೆ ಮಾಡಿತ್ತು. ಅದರೆ, ರಾಜ್ಯ ಸರ್ಕಾರ ಹೆಸರು ಕೈಬಿಡುವಂತೆ ನೋಡಿಕೊಂಡಿತು. ಪಟ್ಟಣ ಆಯ್ಕೆ ಆಗಿದ್ದರೆ ₹ 2000 ಕೋಟಿ ನೆರವು ಬರುತ್ತಿತ್ತು ಎಂದು ಪ್ರತಿಪಾದಿಸಿದರು.
ಈ ಕುರಿತು ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ ತಿವಾರಿ ಅವರು, ‘ಅದೊಂದು ಗೋಪ್ಯವಾದ ಪತ್ರ. ಮಾಧ್ಯಮಗಳಿಗೆ ಸೋರಿಕೆ ಆಗಬಾರದಿತ್ತು. ಈ ಕುರಿತು ಏನು ಹೇಳಬೇಕೋ ಅದನ್ನು ಸಚಿವರಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.