ಟಿಎಂಸಿ
ಕೋಲ್ಕತ್ತ: ‘ಮುರ್ಶಿದಾಬಾದ್ ಜಿಲ್ಲೆಯ ಫರಕ್ಕಾ ಬಿಡಿಒ ಕಚೇರಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ನಡೆದ ವಿಧ್ವಂಸಕ ಕೃತ್ಯ ಸಂಬಂಧ ಟಿಎಂಸಿ ಶಾಸಕ ಮೋನಿರುಲ್ ಇಸ್ಲಾಂ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಚುನಾವಣಾ ಆಯೋಗ ವಿಧಿಸಿದ್ದ ಗಡುವು ಮುಗಿದು ಒಂದು ದಿನ ಕಳೆದರೂ, ಯಾವುದೇ ಪ್ರಕ್ರಿಯೆ ನಡೆದಿಲ್ಲ’ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಮೋನಿರುಲ್ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಮುರ್ಶಿದಾಬಾದ್ ಜಿಲ್ಲಾ ಚುನಾವಣಾಧಿಕಾರಿಗೆ ಆಯೋಗವು ಗುರುವಾರ ಸೂಚನೆ ನೀಡಿತ್ತು.
‘ಈವರೆಗೆ ಯಾವುದೇ ದೂರು ಬಾರದ ಕಾರಣ ಎಫ್ಐಆರ್ ದಾಖಲಿಸಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂಬಂಧ ಎಸ್ಐಆರ್ ಪ್ರಕ್ರಿಯೆ ವೇಳೆ ಅಗತ್ಯ ಭದ್ರತೆ ಒದಗಿಸಬೇಕು. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಚುನಾವಣಾ ಆಯೋಗವು ಸೂಚಿಸಿತ್ತು.
‘ಎಸ್ಐಆರ್ ಪ್ರಕ್ರಿಯೆ ವೇಳೆ ಸಾರ್ವಜನಿಕರಿಗೆ ಕಿರುಕುಳ ನೀಡಲಾಗಿದೆ’ ಎಂದು ಆರೋಪಿಸಿ ಮೋನಿರುಲ್ ತನ್ನ ಬೆಂಬಲಿಗರೊಂದಿಗೆ ಫರಕ್ಕಾ ಬಿಡಿಒ ಕಚೇರಿ ಹೊರಗೆ ಜನವರಿ 14ರಂದು ಪ್ರತಿಭಟನೆ ನಡೆಸಿದ್ದರು. ಜನರ ಗುಂಪೊಂದು ಆವರಣವನ್ನು ಧ್ವಂಸಗೊಳಿಸಿತ್ತು. ಈ ವೇಳೆ ಹಿಂಸಾಚಾರ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.