ಚೆನ್ನೈ: ಮೇಕೆದಾಟು ಯೋಜನೆ ಕೈಬಿಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಒತ್ತಾಯಿಸಿದ್ದಾರೆ. ಯೋಜನೆಗೆ ವಿರೋಧ ವ್ಯಕ್ತಪಡಿಸಬಾರದು ಎಂದು ಕೋರಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರೆದಿದ್ದ ಪತ್ರಕ್ಕೆ ಉತ್ತರಿಸಿ ಸ್ಟಾಲಿನ್ ಪತ್ರ ಬರೆದಿದ್ದಾರೆ.
ಕುಡಿಯುವ ನೀರು ಸರಬರಾಜು ಉದ್ದೇಶವನ್ನು ಹೊಂದಿರುವ ಮೇಕೆದಾಟು ಯೋಜನೆ ಜಾರಿಯಿಂದ ತಮಿಳುನಾಡು ರಾಜ್ಯದ ರೈತರ ಹಿತಾಸಕ್ತಿಗೆ ಧಕ್ಕೆ ಆಗುವುದಿಲ್ಲ ಎಂಬ ಕರ್ನಾಟಕದ ಮುಖ್ಯಮಂತ್ರಿ ಅವರ ಪ್ರತಿಪಾದನೆಯನ್ನು ಸ್ಟಾಲಿನ್ ತಳ್ಳಿಹಾಕಿದ್ದಾರೆ.
ಉದ್ದೇಶಿತ ಮೇಕೆದಾಟು ಯೋಜನೆಯು ಕೃಷ್ಣರಾಜಸಾಗರ, ಶಿಂಸಾ, ಅರ್ಕಾವತಿ, ಸುವರ್ಣಾವತಿ ನದಿಯ ಅಚ್ಚುಕಟ್ಟು ಭಾಗದಿಂದ ತಮಿಳುನಾಡುವಿಗೆ ಹರಿದುಬರುವ ನೀರಿಗೆ ತಡೆಯೊಡ್ಡಲಿದೆ. ಕಾವೇರಿ ನ್ಯಾಯಮಂಡಳಿ ತೀರ್ಪಿನ ಅನುಸಾರ ತಮಿಳುನಾಡಿಗೆ ಸಲ್ಲಬೇಕಾದ ನೀರೂ ಇದರಲ್ಲಿ ಸೇರಿದೆ. ಈ ಕಾರಣದಿಂದ ಯೋಜನೆ ಜಾರಿಯಿಂದ ತಮಿಳುನಾಡು ರೈತರ ಹಿತಕ್ಕೆ ಧಕ್ಕೆಯಾಗದು ಎಂಬ ವಾದವನ್ನು ಒಪ್ಪಲಾಗದು ಎಂದೂ ಹೇಳಿದ್ದಾರೆ.
ತಮಿಳುನಾಡುವಿನ ಎರಡು ಜಲವಿದ್ಯುತ್ ಯೋಜನೆ ಕುರಿತ ಯಡಿಯೂರಪ್ಪ ಅವರ ಹೇಳಿಕೆಕೆ ಪ್ರತಿಕ್ರಿಯಿಸಿ, ಮೇಕೆದಾಟು ಯೋಜನೆಯು 67.13 ಟಿಎಂಸಿ ನೀರು ಸಂಗ್ರಹಿಸುವ ಉದ್ದೇಶವನ್ನು ಹೊಂದಿದೆ. ಆದರೆ, ಜಲವಿದ್ಯುತ್ ಯೋಜನೆಗೆ ಲಭ್ಯವಿರುವ ನೀರನ್ನೇ ಎತ್ತುವಳಿ ಮೂಲಕ ಬಳಸಲಾಗುತ್ತದೆ. ಹೀಗಾಗಿ, ವಿಭಿನ್ನವಾದ ಯೋಜನೆಗಳನ್ನು ಪರಸ್ಪರ ಹೋಲಿಸುವುದು ಸರಿಯಾದ ಕ್ರಮವಲ್ಲ ಎಂದೂ ಪ್ರತಿಪಾದಿಸಿದ್ದಾರೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ ಮತ್ತು ವಿಷಯದ ಸೂಕ್ಷ್ಮತೆಯನ್ನು ಪರಿಗಣಿಸಿ ಮೇಕೆದಾಟು ಯೋಜನೆಯನ್ನು ಕೈಬಿಡಲು ಒತ್ತಾಯಿಸುತ್ತೇನೆ. ಉಭಯ ರಾಜ್ಯಗಳ ನಡುವೆ ಉತ್ತಮ ಸಹಕಾರ, ಬಾಂಧವ್ಯ ಇರಬೇಕು ಎಂದೂ ನಾನು ಬಯಸುತ್ತೇನೆ ಎಂದೂ ಪತ್ರದಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.