ಚೆನ್ನೈ: ‘ನೀಟ್’ ವಿರೋಧಿಸಲು ಮತ್ತು ಶಿಕ್ಷಣದಲ್ಲಿ ‘ರಾಜ್ಯಗಳ ಆದ್ಯತೆ’ ಪುನರ್ಸ್ಥಾಪನೆಗೆ ಬೆಂಬಲ ಕೋರಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಬಿಜೆಪಿಯೇತರ ಆಡಳಿತವಿರುವ 11 ರಾಜ್ಯಗಳು ಮತ್ತು ಗೋವಾದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ನೀಟ್ಗೆ ತಮ್ಮ ಸರ್ಕಾರ ವಿರೋಧವಾಗಿರುವುದನ್ನು ಪತ್ರದಲ್ಲಿ ಪುನರುಚ್ಚರಿಸಿರುವ ಸ್ಟಾಲಿನ್, ನೀಟ್ಗೆ ವಿರೋಧ ವ್ಯಕ್ತಪಡಿಸುವಂತೆ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಲು ತಮ್ಮ ಪಕ್ಷದ ಸಂಸದರನ್ನು ನಿಯೋಜಿಸಿದ್ದಾರೆ ಎಂದು ಸರ್ಕಾರ ಸೋಮವಾರ ಹೇಳಿದೆ.
‘ನಮ್ಮ ಸಂವಿಧಾನದಲ್ಲಿ ಕಲ್ಪಿಸಲಾಗಿರುವಂತೆ ಶಿಕ್ಷಣ ಕ್ಷೇತ್ರ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರಗಳ ಪ್ರಾಮುಖ್ಯತೆ ಪುನರ್ಸ್ಥಾಪಿಸಲು ನಾವು ಒಗ್ಗಟ್ಟಿನ ಪ್ರಯತ್ನ ಮಾಡಬೇಕಾಗಿದೆ. ಈ ನಿರ್ಣಾಯಕ ವಿಷಯದಲ್ಲಿ ನಿಮ್ಮ ಸಹಕಾರಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ’ ಎಂದು ಸ್ಟಾಲಿನ್, ಆಂಧ್ರಪ್ರದೇಶ, ಛತ್ತೀಸ್ಗಡ, ದೆಹಲಿ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಅ.1 ರಂದು ಬರೆದಿರುವ ಪತ್ರವನ್ನು ಸೋಮವಾರ ಮಾಧ್ಯಮಗಳಿಗೆ ನೀಡಿರುವ ಅವರು, ರಾಜ್ಯ ಸರ್ಕಾರಗಳು ತಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ವಿಧಾನವನ್ನು ನಿರ್ಧರಿಸುವಲ್ಲಿ ತಮ್ಮ ಸಾಂವಿಧಾನಿಕ ಹಕ್ಕು ಮತ್ತು ಸ್ಥಾನವನ್ನು ಪ್ರತಿಪಾದಿಸಬೇಕಾಗಿದೆ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ನೀಟ್ನ ಪರಿಣಾಮ ಕಂಡುಹಿಡಿಯಲು ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ಎ.ಕೆ. ರಾಜನ್ ಸಮಿತಿಯು ಜುಲೈನಲ್ಲಿ ಸಲ್ಲಿಸಿರುವ 165 ಪುಟಗಳ ವರದಿಯನ್ನು ಮತ್ತು ಈ ವರದಿ ಆಧಾರದಲ್ಲಿ ಸೆ.13 ರಂದು ವಿಧಾಸಭೆಯಲ್ಲಿ ಅಂಗೀಕರಿಸಲಾದ ನೀಟ್ನಿಂದ ವಿನಾಯಿತಿ ನೀಡುವ ಮಸೂದೆಯ ಪ್ರತಿಯನ್ನು ಸ್ಟಾಲಿನ್ ಈ ಪತ್ರದ ಜತೆಗೆ ಲಗತ್ತಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.