ಚೆನ್ನೈ: ಡಿಎಂಕೆ ನೇತೃತ್ವದ ಸರ್ಕಾರವು ‘ಪಿಎಂ–ಶ್ರೀ’ ಯೋಜನೆಯ ಜಾರಿಗೆ ಹಿಂಜರಿಯುತ್ತಿದೆ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಗುರುವಾರ ಆರೋಪಿಸಿದ್ದಾರೆ.
‘ತಮಿಳುನಾಡು ಸರ್ಕಾರವು ಪಿಎಂ–ಶ್ರೀ ಯೋಜನೆಗೆ ಸೇರಲು ಆರಂಭದಲ್ಲಿ ಒಪ್ಪಿಕೊಂಡಿತ್ತಲ್ಲದೆ, ಕೇಂದ್ರ ಸರ್ಕಾರದ ಜತೆ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಿತ್ತು. ಆದರೆ ಸಹಿ ಬೀಳಲಿದೆ ಎನ್ನುವಾಗ ರಾಜ್ಯ ಸರ್ಕಾರವು ಒಪ್ಪಂದದ ನಿಯಮಗಳಲ್ಲಿ ಬದಲಾವಣೆಗೆ ಮುಂದಾಯಿತು. ಆ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ’ ಎಂದು ಹೇಳಿದರು.
‘ನಮ್ಮ ರಾಜ್ಯವು ಒಪ್ಪಂದವನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ ಅಥವಾ ಒಪ್ಪಿಕೊಂಡಿಲ್ಲ. ಸಹಿ ಹಾಕಲು ಹಿಂಜರಿಕೆ ತೋರುತ್ತಿದೆ’ ಎಂದರು. ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರವು ಪಿಎಂ–ಶ್ರೀ ಯೋಜನೆ ಜಾರಿಗೊಳಿಸಿದೆ.
ರಾಜ್ಯ ಪಠ್ಯಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್, ತಮಿಳುನಾಡಿನ ಪಠ್ಯಕ್ರಮ ‘ಸ್ಪರ್ಧಾತ್ಮಕವಾಗಿಲ್ಲ’ ಎಂದಿದ್ದ ರಾಜ್ಯಪಾಲರ ಹಿಂದಿನ ಹೇಳಿಕೆಯನ್ನು ತಳ್ಳಿಹಾಕಿದ್ದರು. ಅದರ ಬೆನ್ನಲ್ಲೇ ರವಿ ಅವರು ಈ ಆರೋಪ ಮಾಡಿದ್ದಾರೆ.
ಯಾವುದೇ ಷರತ್ತುಗಳನ್ನು ವಿಧಿಸದೆ ಪಿಎಂ–ಶ್ರೀ ಯೋಜನೆಗೆ ಸೇರ್ಪಡೆಗೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮಿಳುನಾಡು ಸರ್ಕಾರವನ್ನು ಬುಧವಾರ ಒತ್ತಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.