ನಾಗರಕೋಯಿಲ್: ‘ಒಂದೇ ಸಂಸ್ಕೃತಿ, ಒಂದೇ ದೇಶ ಮತ್ತು ಒಂದೇ ಇತಿಹಾಸ’ ಎಂಬ ಹೆಸರಿನಲ್ಲಿ ಇತರೆ ಭಾಷೆ ಮತ್ತು ಸಂಸ್ಕೃತಿಗಳನ್ನು ವಿರೋಧಿಸುವ ಶಕ್ತಿಗಳನ್ನು ದೂರವಿಡಲು ಭಾರತಕ್ಕೆತಮಿಳುನಾಡು ಮಾರ್ಗ ತೋರಿಸಬೇಕು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿದರು.
ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ನಲ್ಲಿ ಸೋಮವಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು,‘ತಮಿಳಿಯನ್ನರನ್ನು ಹೊರತುಪಡಿಸಿ ತಮಿಳುನಾಡನ್ನು ಆಳಲು ಬೇರೆ ಯಾರಿಗೂ ಸಾಧ್ಯವಿಲ್ಲ. ತಮಿಳು ಭಾಷೆಯನ್ನು ಪ್ರತಿನಿಧಿಸುವ ವ್ಯಕ್ತಿ ಮಾತ್ರ ತಮಿಳುನಾಡಿನ ಮುಖ್ಯಮಂತ್ರಿಯಾಗಲು ಸಾಧ್ಯ ಎಂಬುದನ್ನು ಈ ಚುನಾವಣೆಯಲ್ಲಿ ತೋರಿಸೋಣ’ ಎಂದರು.
‘ಪ್ರಧಾನಿ ಮೋದಿಗೆ ತಲೆಬಾಗುವ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರಿಂದ ಇದು ಸಾಧ್ಯವಿಲ್ಲ. ಮುಖ್ಯಮಂತ್ರಿ, ರಾಜ್ಯದ ಜನರಿಗೆ ತಲೆಬಾಗಬೇಕು. ಆರ್ಎಸ್ಎಸ್ ಮತ್ತು ಮೋದಿ, ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನು ಅವಮಾನ ಮಾಡುತ್ತಾರೆ. ಅವರಿಗೆ ಇಲ್ಲಿ ಹಿಡಿತವನ್ನು ಸಾಧಿಸಲು ಬಿಡಬಾರದು’ಎಂದು ಅವರು ವಾಗ್ದಾಳಿ ನಡೆಸಿದರು.
ತಮಿಳುನಾಡಿನ 234 ವಿಧಾನಸಭಾ ಸ್ಥಾನಗಳಿಗೆ ಒಂದು ಹಂತದ ಚುನಾವಣೆಯು ಏಪ್ರಿಲ್ 6 ರಂದು ನಡೆಯಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್, ಡಿಎಂಕೆಯೊಂದಿಗೆ ಕೈ ಜೋಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.