ADVERTISEMENT

ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯ ಪ್ರಮುಖ ಉಗ್ರನ ಕೊಂದ ರಕ್ಷಣಾ ಪಡೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 11:32 IST
Last Updated 15 ಜನವರಿ 2020, 11:32 IST
   

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಬುಧವಾರ ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ನಡೆಸಿದಎನ್‌ಕೌಂಟರ್‌ನಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯ ಪ್ರಮುಖನನ್ನು ಹತ್ಯೆ ಮಾಡಲಾಗಿದೆ.

‘ಗೋಂಡಾನಾ ವಲಯದ ಜಿಲ್ಲೆಗಳಲ್ಲಿ ಉಗ್ರರು ಅಡಗಿರುವ ಬಗ್ಗೆ ರಕ್ಷಣಾ ಇಲಾಖೆಗೆ ಬುಧವಾರ ಬೆಳಗ್ಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧರಿಸಿ ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿದರು. ಈ ವೇಳೆ ಉಗ್ರರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಗುಂಡಿನ ಕಾಳಗ ನಡೆಯಿತು,’ ಎಂದು ರಕ್ಷಣಾ ಇಲಾಖೆ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್‌ ಕರ್ನಲ್‌ ದೇವೇಂದರ್‌ ಆನಂದ್‌ ತಿಳಿಸಿದ್ದಾರೆ.

‘ಈ ಕಾಳಗದಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯ ಪ್ರಮುಖ ಹರೂನ್‌ ವಾನಿಯನ್ನು ಕೊಲ್ಲಲಾಗಿದೆ. ಈತ ಜಮ್ಮು ಕಾಶ್ಮೀರದ ಘಟ್ಟ ಮೂಲದವ,’ ಎಂದು ದೋಡಾ, ಕಿಶ್ತ್‌ವಾರ, ರಂಬನ್‌ ರೇಂಜ್‌ನ ಉಪ ಇನ್ಸ್‌ಪೆಕ್ಟರ್‌ ಜನರಲ್‌ ಸುಜಿತ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

‘ಮಂಜು ಮುಸುಕಿದ ವಾತಾವರಣವಿದ್ದ ಕಾರಣದಿಂದ ಮತ್ತೊಬ್ಬ ಉಗ್ರ ತಪ್ಪಿಸಿಕೊಂಡಿದ್ದು, ಆತನ ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ,’ ಎಂದು ಸುಜಿತ್‌ ಕುಮಾರ್‌ ತಿಳಿಸಿದ್ದಾರೆ.

‘ಮೃತ ಉಗ್ರನಿಂದ ಎಕೆ–47 ಬಂದೂಕು, 73 ಸುತ್ತುಗಳ ಮೂರು ಮ್ಯಾಗಜೀನ್‌ಗಳು, ಚೀನಾ ಗ್ರೆನೈಡ್‌ ಮತ್ತು ರೇಡಿಯೊವನ್ನು ವಶಪಡಿಸಿಕೊಳ್ಳಲಾಗಿದೆ,’ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.