ನವದೆಹಲಿ: ದೆಹಲಿಯಿಂದ ಜೈಪುರಕ್ಕೆ ‘ಎಲೆಕ್ಟ್ರಿಕ್ ಹೈವೇ’ ನಿರ್ಮಿಸುವ ಕುರಿತು ವಿದೇಶಿ ಕಂಪನಿಯೊಂದಿಗೆ ಸಾರಿಗೆ ಸಚಿವಾಲಯ ಮಾತುಕತೆ ನಡೆಸುತ್ತಿದೆ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೇಳಿದರು.
ರಾಜಸ್ಥಾನದ ದೌಸಾದಲ್ಲಿ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ (ಡಿಎಂಇ) ಕಾಮಗಾರಿ ಪರಿಶೀಲನೆ ಬಳಿಕ ಮಾತನಾಡಿದ ಅವರು, ‘ವಿದ್ಯುತ್ ಚಾಲಿತ ರೈಲು ಎಂಜಿನ್ಗಳಂತೆ ಬಸ್ ಹಾಗೂ ಟ್ರಕ್ಗಳಿಗೂ ವಿದ್ಯುತ್ ನೆರವು ನೀಡಲಾಗುವುದು’ ಎಂದರು.
‘ದೆಹಲಿಯಿಂದ ಜೈಪುರಕ್ಕೆ ಎಲೆಕ್ಟ್ರಿಕ್ ಹೈವೇ ನಿರ್ಮಿಸುವುದು ನನ್ನ ಕನಸು. ಇದು ಸದ್ಯ ಪ್ರಸ್ತಾವಿತ ಯೋಜನೆಯಾಗಿದೆ. ಈ ಬಗ್ಗೆ ವಿದೇಶಿ ಕಂಪನಿಯೊಂದಿಗೆ ಚರ್ಚಿಸುತ್ತಿದ್ದೇವೆ. ನಾನು ಸಾರಿಗೆ ಸಚಿವನಾಗಿ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಮೇಲಿನ ಅವಲಂಬನೆಯನ್ನು ಆದಷ್ಟು ತಗ್ಗಿಸಲು ನಿರ್ಣಯ ತೆಗೆದುಕೊಂಡಿದ್ದೇನೆ’ ಎಂದು ಹೇಳಿದರು.
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ (ಡಿಎಂಇ) ಕಾಮಗಾರಿಯನ್ನು ಗುರುವಾರ ನಿತಿನ್ ಗಡ್ಕರಿ ಪರಿಶೀಲಿಸಿದರು. ಇದು ದೆಹಲಿ ಮತ್ತು ಮುಂಬೈ ನಡುವಿನ ಪ್ರಯಾಣದ ಸಮಯವನ್ನು 24 ಗಂಟೆಗಳಿಂದ 12 ಗಂಟೆಗೆ ಕಡಿಮೆಗೊಳಿಸುವ ನಿರೀಕ್ಷೆಯಿದೆ.
ಎಂಟು ಪಥಗಳ ಎಕ್ಸ್ಪ್ರೆಸ್ವೇ ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್ ಮೂಲಕ ಹಾದು ಹೋಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.