ADVERTISEMENT

ಸೌದಿಯಲ್ಲಿ ಮೃತಪಟ್ಟ ವ್ಯಕ್ತಿಯ ಅಸ್ಥಿ ಭಾರತಕ್ಕೆ ತರಲು ಯತ್ನ: ಕೇಂದ್ರ

ಮುಸ್ಲಿಂ ಸಂಪ್ರದಾಯದಂತೆ ನಡೆದಿರುವ ಹಿಂದೂ ವ್ಯಕ್ತಿ ಅಂತ್ಯಕ್ರಿಯೆ: ದೆಹಲಿ ಹೈಕೋರ್ಟ್‌ಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 11:11 IST
Last Updated 24 ಮಾರ್ಚ್ 2021, 11:11 IST
.
.   

ನವದೆಹಲಿ: ಹೃದಯಾಘಾತದಿಂದ ಸೌದಿ ಅರೇಬಿಯಾದಲ್ಲಿ ಸಾವಿಗೀಡಾದ ಹಿಂದೂ ವ್ಯಕ್ತಿಯೊಬ್ಬರನ್ನು ಮುಸ್ಲಿಂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಥಿಗಳನ್ನು ಹೊರತೆಗೆದು ಭಾರತಕ್ಕೆ ತರುವ ಬಗ್ಗೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಬುಧವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿ ಪ್ರತಿಭಾ ಸಿಂಗ್‌ ಅವರ ಪೀಠಕ್ಕೆ ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಿವರ ಸಲ್ಲಿಸಿದೆ.

ಸೌದಿ ಅರೇಬಿಯಾದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಈ ವಿಷಯದ ಬಗ್ಗೆ ಚರ್ಚಿಸಲಾಗಿದೆ. ಆದರೆ, ಯಾವುದೇ ಸಮಯದ ಮಿತಿಯನ್ನು ಅವರು ನೀಡಿಲ್ಲ. ಆದರೂ, ಸಾಧ್ಯವಾದಷ್ಟು ಶೀಘ್ರ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ADVERTISEMENT

ಜೆಡ್ಡಾದಲ್ಲಿರುವ ಭಾರತದ ಕಾನ್ಸುಲೇಟ್‌ನ ಅಧಿಕಾರಿಗಳು ಮರಣ ಪ್ರಮಾಣ ಪತ್ರದಲ್ಲಿ ವ್ಯಕ್ತಿಯ ಧರ್ಮವನ್ನು ಮುಸ್ಲಿಂ ಎಂದು ತಪ್ಪಾಗಿ ನಮೂದಿಸಿದ್ದರು. ತಪ್ಪು ಅನುವಾದವೇ ಇದಕ್ಕೆ ಕಾರಣವಾಗಿತ್ತು. ಹೀಗಾಗಿ, ಅಂತ್ಯಕ್ರಿಯೆಯನ್ನು ಮುಸ್ಲಿಂ ಸಂಪ್ರದಾಯದಂತೆ ನೆರವೇರಿಸಲಾಗಿತ್ತು.

ತನ್ನ ಪತಿಯ ಅಸ್ಥಿಗಳನ್ನು ಹೊರತೆಗೆದು ಒಪ್ಪಿಸಲು ಕ್ರಮ ಕೈಗೊಳ್ಳುವಂತೆ ವಿದೇಶಾಂಗ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಅಂಜು ಶರ್ಮಾ ಎನ್ನುವವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಸಂಜೀವ್‌ಕುಮಾರ್ ಎಂಬುವವರು ಜನವರಿ 24ರಂದು ಹೃದಯಾಘಾತದಿಂದ ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದರು.

ಸೌದಿ ಅರೇಬಿಯಾದಲ್ಲಿ ಸದ್ಯ ಜಾರಿಯಲ್ಲಿರುವ ನಿಯಮಗಳ ಪ್ರಕಾರ, ಭಾರತದ ನಾಗರಿಕನ ಅಂತ್ಯಕ್ರಿಯೆಗೆ ಮುನ್ನ ಭಾರತೀಯ ಕಾನ್ಸುಲೇಟ್‌ನ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಈ ಪ್ರಕರಣದಲ್ಲಿ ಈ ಪ್ರಕ್ರಿಯೆಯನ್ನು ಪಾಲಿಸಿಲ್ಲ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.