ಹೈದರಾಬಾದ್: ತಿರುಪತಿ ದೇವಸ್ಥಾನಕ್ಕೆ ಸೇರಿದ ಸ್ಥಿರಾಸ್ತಿಗಳ ಮಾರಾಟ ನಿರ್ಧಾರವು ತೀವ್ರ ವಿವಾದ ಹಾಗೂವಿರೋಧಕ್ಕೆ ಕಾರಣವಾದ ಬೆನ್ನಲ್ಲೇ, ಭಕ್ತರು ದೇಣೆಗೆಯಾಗಿ ನೀಡಿದ ಸ್ಥಿರಾಸ್ತಿಗಳನ್ನು ಮಾರಾಟ ಮಾಡದೇ ಇರಲು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿ ನಿರ್ಧರಿಸಿದೆ.
ಗುರುವಾರ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ‘ಒತ್ತುವರಿಯಾಗಿರುವ ಆಸ್ತಿಗಳನ್ನು ಹೇಗೆ ವಾಪಸ್ ಪಡೆದು ಬಳಸಿಕೊಳ್ಳಬಹುದು ಎನ್ನುವುದರ ಕುರಿತು ಸಲಹೆಗಳನ್ನು ಸ್ವೀಕರಿಸಲು ಸಮಿತಿಯೊಂದನ್ನು ರಚಿಸಲಾಗುವುದು. ಇದರಲ್ಲಿ ಅಧಿಕಾರಿಗಳು, ಭಕ್ತರು, ಧಾರ್ಮಿಕ ಸಂಘಸಂಸ್ಥೆಗಳ ಮುಖ್ಯಸ್ಥರು ಇರಲಿದ್ದಾರೆ’ ಎಂದು ಮಂಡಳಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದರು.
ಲಾಕ್ಡೌನ್ ಕಾರಣದಿಂದಾಗಿದೇವಸ್ಥಾನಕ್ಕೆ ಆದಾಯ ಕುಸಿತವಾದ ಸಂದರ್ಭದಲ್ಲಿ ಆಸ್ತಿ ಹರಾಜು ಹಾಕುವ ನಿರ್ಧಾರಕ್ಕೆ ಮಂಡಳಿ ಬಂದಿತ್ತು. ಇದಕ್ಕೆ ರಾಷ್ಟ್ರದಾದ್ಯಂತ ವಿರೋಧ ವ್ಯಕ್ತವಾಗಿತ್ತು. ಟಿಟಿಡಿಯ ಈ ಚಿಂತನೆಗೆ ಜಗನ್ಮೋಹನ್ ರೆಡ್ಡಿ ಸರ್ಕಾರ ಸೋಮವಾರ ತಡೆ ನೀಡಿತ್ತು. ಆಸ್ತಿ ಹರಾಜು ವಿಚಾರವನ್ನು ಸಮರ್ಥಿಸಿಕೊಂಡಿರುವ ಮಂಡಳಿ, ಈ ಯೋಜನೆಯನ್ನು ಹಿಂದಿನ ಮಂಡಳಿಯೇ ಪ್ರಾರಂಭಿಸಿತ್ತು ಎಂದಿದೆ.
ಈ ಘಟನೆಗಳ ಕುರಿತು ತನಿಖೆ ನಡೆಸಲು ಸಮಿತಿ ರಚಿಸಬೇಕು ಎಂದು ಆಗ್ರಹಿಸಿ ಮಂಡಳಿಯು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಿದೆ ಎಂದು ಸುಬ್ಬಾರೆಡ್ಡಿ ತಿಳಿಸಿದರು.
ದೇವಸ್ಥಾನ ತೆರೆಯಲು ಸಿದ್ಧತೆ: ‘ದೇವಸ್ಥಾನ ತೆರೆಯಲು ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ. ಸರ್ಕಾರದ ಹಸಿರು ನಿಶಾನೆಗೆ ಕಾಯುತ್ತಿದ್ದೇವೆ. ಭಕ್ತರು ಅಂತರ ಕಾಪಾಡಿಕೊಂಡು ದೇವರ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಲಾಡು ತಯಾರಿ ಸ್ಥಳದ ಪರಿಶೀಲನೆಯೂ ನಡೆದಿದೆ’ ಎಂದು ರೆಡ್ಡಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.