ADVERTISEMENT

ಭಾರತೀಯರಿಬ್ಬರು ಚೀನಿ ಗಡಿಯಲ್ಲಿ ಕಣ್ಮರೆ: ಸೇನೆ ಬಂಧಿಸಿಟ್ಟಿರುವ ಶಂಕೆ

ಪಿಟಿಐ
Published 4 ಆಗಸ್ಟ್ 2024, 16:18 IST
Last Updated 4 ಆಗಸ್ಟ್ 2024, 16:18 IST
ಭಾರತ –ಚೀನಾ ಗಡಿ ಪ್ರದೇಶ
ಭಾರತ –ಚೀನಾ ಗಡಿ ಪ್ರದೇಶ   

ನವದೆಹಲಿ: ಅರುಣಾಚಲ ಪ್ರದೇಶದ ಇಬ್ಬರು ವ್ಯಕ್ತಿಗಳು ಕಳೆದ ಎರಡು ವರ್ಷಗಳಿಂದ ಕಣ್ಮರೆಯಾಗಿದ್ದಾರೆ. ಗಿಡಮೂಲಿಕೆ ಔಷಧ ಸಸ್ಯಗಳನ್ನು ಹುಡುಕೊಂಡು ಭಾರತ– ಚೀನಾ ಗಡಿಯ ದುರ್ಗಮ ಪ್ರದೇಶಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಈ ಇಬ್ಬರನ್ನು ಚೀನಿ ಸೇನೆ ಬಂಧಿಸಿ ವಶದಲ್ಲಿಟ್ಟುಕೊಂಡಿದೆ ಎಂದು ನಂಬಲಾಗಿದೆ. ಆದರೆ, ಚೀನಿ ಸೇನೆ ಇದನ್ನು ಈವರೆಗೆ ಒಪ್ಪಿಕೊಂಡಿಲ್ಲ. ಯಾವುದೇ ಪ್ರತಿಕ್ರಿಯೆ ಕೂಡ ನೀಡಿಲ್ಲ.

ಬಟೆಲಮ್‌ ಟಿಕ್ರೊ (35) ಮತ್ತು ಇವರ ಸೋದರ ಸಂಬಂಧಿ ಬೈನ್ಸಿ ಮಾನ್ಯು (37) ಕಾಣೆಯಾದವರು. ಟಿಕ್ರೊ ಅವಿವಾಹಿತನಾಗಿದ್ದು, ಮಾನ್ಯು ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. 

2022ರ ಆಗಸ್ಟ್‌ 19ರಂದು ಈ ಇಬ್ಬರು ಗಿಡಮೂಲಿಕೆ ಔಷಧ ಸಸ್ಯಗಳನ್ನು ಅರಸಿಕೊಂಡು ಅರುಣಾಚಲ ಪ್ರದೇಶದ ಅಂಜಾವ್‌ ಜಿಲ್ಲೆಯ ಎತ್ತರದ ಛಾಗ್ಲಾಗಾಮ್‌ ಪ್ರದೇಶಕ್ಕೆ ಹೋಗಿದ್ದರು. 2022ರ ಆಗಸ್ಟ್‌ 24ರಂದು ಇವರು ಕೊನೆ ಬಾರಿಗೆ ಕೆಲವು ಗ್ರಾಮಸ್ಥರ ಕಣ್ಣಿಗೆ ಗಡಿ ಭಾಗದಲ್ಲಿ ಕಾಣಿಸಿದ್ದರು. ಆನಂತರ, ಈ ಇಬ್ಬರೂ ಎಲ್ಲೂ ಕಾಣಿಸಿಲ್ಲ. ಇವರಿಗಾಗಿ ವ್ಯಾಪಕ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.

ADVERTISEMENT

‘ಇಬ್ಬರನ್ನೂ ಚೀನಾ ಸೇನೆ ಬಂಧಿಸಿಟ್ಟಿದೆ ಎಂಬುದು ನಮಗೆ ತಿಳಿದಿದೆ. ನಮ್ಮ ಸಹೋದರರ ಬಗ್ಗೆ ಮಾಹಿತಿ ಪಡೆಯಲು ಸ್ಥಳೀಯ ಸೇನಾ ಅಧಿಕಾರಿಗಳನ್ನು ಹಲವು ಬಾರಿ ಸಂಪರ್ಕಿಸಿದ್ದೇವೆ. ಈ ವಿಷಯವನ್ನು ಭಾರತೀಯ ಸೇನೆಯು ಚೀನಿ ಸೇನೆ ಜತೆಗೆ ಪ್ರಸ್ತಾಪಿಸಿದೆ. ಆದರೆ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಟಿಕ್ರೊ ಅವರ ಸಹೋದರ ದಿಶಾನ್ಸೊ ಚಿಕ್ರೊ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.