ಲಖನೌ:ಉತ್ತರ ಪ್ರದೇಶದಲ್ಲಿ ಅಮೃತಸರ-ಜಯನಗರ ಎಕ್ಸ್ಪ್ರೆಸ್ ರೈಲಿನ ಎರಡು ಬೋಗಿಗಳು ಇಂದು ಮುಂಜಾನೆ ಹಳಿ ತಪ್ಪಿದ ಪರಿಣಾಮ ಅವಘಡ ಸಂಭವಿಸಿದೆ.
ಆದರೆ ಘಟನೆಯಲ್ಲಿ ಯಾವುದೇ ಗಾಯದ ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿದೆ.
ಲಕನೌ ಡಿವಿಷನ್ನ ಚಾರ್ಬಾಗ್ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಗ್ಗೆ 7.50ರ ಹೊತ್ತಿಗೆ ಅಮೃತಸರ-ಜಯನಗರ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದವು.
ಎರಡು ಬೋಗಿಗಳಲ್ಲಿ 155ರಷ್ಟು ಪ್ರಯಾಣಿಕರಿದ್ದರು. ಅವರೆಲ್ಲರೂ ಸುರಕ್ಷಿತರಾಗಿದ್ದು, ಯಾವುದೇ ಗಾಯ ವರದಿಯಾಗಿಲ್ಲ ಎಂದು ಉತ್ತರ ರೈಲ್ವೆಯ ವಿಭಾಗೀಯ ವ್ಯವಸ್ಥಾಪಕ ಸಂಜಯ್ ತ್ರಿಪಾಠಿ ತಿಳಿಸಿದ್ದಾರೆ.
ನಿಲ್ದಾಣದಿಂದ ಹೊರಟ ರೈಲು ನಿಧಾನಗತಿಯಲ್ಲಿ ಚಲಿಸುತ್ತಿತ್ತು. ಹಳಿ ತಪ್ಪಲು ಹಿಂದಿರುವ ಕಾರಣವನ್ನು ತಿಳಿಯಲು ತನಿಖೆಗಾಗಿ ಸಮಿತಿಯನ್ನು ರಚಿಸಲಾಗುತ್ತಿದೆ.
ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಅವಘಡ ನಡೆದ ತಕ್ಷಣ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.