ಜಮ್ಮು (ಪಿಟಿಐ): ಗುಲಾಂನಬಿ ಆಜಾದ್ ನೇತೃತ್ವದ ಡೆಮಾಕ್ರಟಿಕ್ ಆಜಾದ್ ಪಾರ್ಟಿಯ (ಡಿಎಪಿ) ಇಬ್ಬರು ಮಾಜಿ ನಾಯಕರು ಹಾಗೂ ಅವರ ಬೆಂಬಲಿಗರು ಮಂಗಳವಾರ ಕಾಂಗ್ರೆಸ್ ಸೇರಿದ್ದು, ಡಿಎಪಿ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಎಐಸಿಸಿ ಉಸ್ತುವಾರಿಯಾಗಿರುವ ರಜನಿ ಪಾಟೀಲ್ ಮತ್ತು ಜಮ್ಮು–ಕಾಶ್ಮೀರದ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿಕಾರ್ ರಸೂಲ್ ವಾನಿ ಅವರ ಸಮ್ಮುಖದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಿಜಾಮುದ್ದೀನ್ ಖತಾನಾ ಹಾಗೂ ಅವರ ಪುತ್ರ ಗುಲ್ಜರ್ ಅಹ್ಮದ್ ಖತಾನಾ ಅವರು ತಮ್ಮ ಬೆಂಬಲಿಗರೊಂದಿಗೆ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಸೇರಿದರು. ಈ ತಿಂಗಳ ಆರಂಭದಲ್ಲಿ ಡಿಎಪಿ ತೊರೆದು ಬಂದಿದ್ದ ಮಾಜಿ ಉಪಮುಖ್ಯಮಂತ್ರಿ ತಾರಾ ಚಂದ್, ಮಾಜಿ ಸಚಿವ ಪೀರ್ಜಾದ ಮೊಹಮ್ಮದ್ ಸಯೀದ್, ಮಾಜಿ ಶಾಸಕ ಬಲ್ವಾನ್ ಸಿಂಗ್ ಅವರು ಉಪಸ್ಥಿತರಿದ್ದರು.
ಪಕ್ಷ ಸೇರಿದವರಿಗೆ ಶುಭ ಹಾರೈಸಿದ ಪಾಟೀಲ್ ಅವರು, ಪಕ್ಷದಲ್ಲಿ ಇವರಿಗೆ ಗೌರವ ಸಿಗಲಿದೆ, ಡಿಎಪಿ ಪಕ್ಷದ ಇನ್ನೂ ಹಲವು ನಾಯಕರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.