ಶ್ರೀನಗರ: ಜಮ್ಮು–ಕಾಶ್ಮೀರದ ಗುಲ್ಮರ್ಗ್ನಲ್ಲಿರುವ ಸ್ಕಿ ರೆಸಾರ್ಟ್ನಲ್ಲಿ ಬುಧವಾರ ಸಂಭವಿಸಿದ ಭಾರಿ ಹಿಮಪಾತದಲ್ಲಿ ಪೋಲೆಂಡ್ನ ಇಬ್ಬರು ಪ್ರವಾಸಿಗರು ಮೃತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ 12.30 ಸುಮಾರಿಗೆ ಹಿಮಕುಸಿತ ಸಂಭವಿಸಿದ್ದು, ಈ ಇಬ್ಬರು ಅಲ್ಲದೆ ಇತರ ವಿದೇಶಿಗರು ಮತ್ತು ಸ್ಥಳೀಯರು ಇಳಿಜಾರಿನಲ್ಲಿದ್ದರು. ಈವರೆಗೆ ಕನಿಷ್ಠ 19 ವಿದೇಶಿಗರನ್ನು ರಕ್ಷಿಸಿ ಅಫರ್ವತ್ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಪೋಲೆಂಡ್ನ ಇಬ್ಬರು ಪ್ರವಾಸಿಗರ ಶವವನ್ನು ವಶಪಡಿಸಿಕೊಳ್ಳಲಾಗಿದ್ದು, ವೈದ್ಯಕೀಯ ಹಾಗೂ ಕಾನೂನು ಪ್ರಕ್ರಿಯೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಾರಾಮುಲ್ಲಾ ಜಿಲ್ಲೆಯ ಪ್ರವಾಸಿ ತಾಣದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಮಪಾತದ ವಿಡಿಯೊಗಳು, ಜನರು ತಮ್ಮ ಪ್ರಾಣರಕ್ಷಣೆಗಾಗಿ ಓಡುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಇಬ್ಬರು ವಿದೇಶಿ ಸ್ಕೀಯರ್ಗಳು, ಇಬ್ಬರು ಗೈಡ್ಗಳು ಸೇರಿ ನಾಲ್ಕು ವ್ಯಕ್ತಿಗಳು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘20 ಅಡಿ ಎತ್ತರದ ಹಿಮ ಕುಸಿದದ್ದನ್ನು ಕಣ್ಣಾರೆ ಕಂಡೆವು. ಪ್ರಕೃತಿ ತನ್ನ ಕೋಪವನ್ನು ತೋರಿತು’ ಎಂದು ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಸದಸ್ಯ ಕರ್ನಾಟಕದ ದೀಪಕ್ ಚಿಂಚೋರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.