ನವದೆಹಲಿ: ದೇಶದಲ್ಲಿ ‘ಜಲಜೀವನ್ ಮಿಷನ್’ ಯೋಜನೆಯನ್ನು 2019ರಲ್ಲಿ ಆರಂಭಿಸಿದ ಬಳಿಕ ಐದು ಕೋಟಿ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ. ನಲ್ಲಿಯ ಮೂಲಕ ಸುಮಾರು 1.25 ಲಕ್ಷ ಗ್ರಾಮಗಳಲ್ಲಿ ಮನೆಗಳಿಗೆ ನೀರು ಪೂರೈಕೆ ಆಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಭಾರತದಲ್ಲಿ ಕಳೆದ ಏಳು ದಶಕಗಳಲ್ಲಿ ಆಗದಿದ್ದ ಸಾಧನೆ ಕಳೆದ ಎರಡು ವರ್ಷಗಳಲ್ಲಿ ಆಗಿದೆ ಎಂದೂ ಹೇಳಿದರು. ಗ್ರಾಮ ಪಂಚಾಯಿತಿ, ಪಾಣಿ ಸಮಿತಿ, ಗ್ರಾಮ ಸಮಿತಿಗಳ ಸದಸ್ಯರ ಜೊತೆಗೆ ಸಂವಾದ ನಡಸಿದ ಅವರು, ‘ಮಿಷನ್ ಕೇವಲ ನೀರು ಪೂರೈಕೆ ಉದ್ದೇಶವನ್ನಷ್ಟೇ ಹೊಂದಿಲ್ಲ. ಮಹಿಳಾ ಮುನ್ನಡೆ ಮತ್ತು ವಿಕೇಂದ್ರೀಕರಣದ ಅಭಿಯಾನವೂ ಆಗಿದೆ’ ಎಂದರು.
ಸ್ವಾತಂತ್ರ್ಯದ ನಂತರ 2019ರವರೆಗೆ ದೇಶದಲ್ಲಿ ಮೂರು ಕೋಟಿ ಕುಟುಂಬಗಳಿಗಷ್ಟೇ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರು ಪೂರೈಕೆ ಆಗುತ್ತಿತ್ತು. ಈಗ 80 ಜಿಲ್ಲೆಗಳಲ್ಲಿ 5 ಕೋಟಿ ಕುಟುಂಬಗಳಿಗೆ ಸಂಪರ್ಕ ಒದಗಿಸಲಾಗಿದೆ ಎಂದರು.
ಈಗ ದೇಶದ ಯಾವುದೇ ಭಾಗದಲ್ಲಿ ಟ್ಯಾಂಕರ್ಗಳು, ರೈಲು ಮೂಲಕ ನೀರು ಪೂರೈಸುವ ವ್ಯವಸ್ಥೆ ಇಲ್ಲ ಎಂದರು. ಕಾಂಗ್ರೆಸ್ ನೇತೃತ್ವದ ಆಡಳಿತವನ್ನು ಟೀಕಿಸಿದ ಅವರು, ಹಿಂದೆ ನೀರು ಕೆಲವರ ಮನೆಗಳು, ಈಜುಕೊಳದಲ್ಲಿಯಷ್ಟೇ ಇತ್ತು ಎಂದರು.
ಹಿಂದೆ ಆಡಳಿತ ನಡೆಸಿದವರು ಬಡತವನ್ನು ನೋಡಿರಲಿಲ್ಲ. ಅದು, ಅವರಿಗೆ ಆಕರ್ಷಣೆಯಾಗಿತ್ತು. ಜ್ಞಾನದ ಪ್ರದರ್ಶನದ ವೇದಿಕೆ ಆಗಿತ್ತು. ಅವರು ಮಾದರಿ ಗ್ರಾಮ ನಿರ್ಮಿಸಬಹುದಿತ್ತು. ಆದರೆ, ಅವರಿಗೆ ಅಲ್ಲಿನ ಸಮಸ್ಯೆಗಳಷ್ಟೇ ಇಷ್ಟವಾಗಿದ್ದವು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.