ನವದೆಹಲಿ: ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಕರಡು ಸಿದ್ಧಪಡಿಸಲು ನ್ಯಾಯಾಂಗ ಆಯೋಗ ಅಥವಾ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯು ದೆಹಲಿ ಹೈಕೋರ್ಟ್ನಲ್ಲಿ ಮಂಗಳವಾರ ವಿಚಾರಣೆಗೆ ಬರಲಿದೆ.
ನ್ಯಾಯಮೂರ್ತಿಗಳಾದ ಡಿ.ಎನ್. ಪಟೇಲ್ ಮತ್ತು ಸಿ. ಹರಿಶಂಕರ್ ಅವರ ಪೀಠದಲ್ಲಿ ಇದೇ ರೀತಿಯ ಪ್ರಕರಣಗಳ ಜತೆಗೆ ಈ ಅರ್ಜಿಯೂ ವಿಚಾರಣೆಗೆ ಬರಲಿದೆ.
ಎಲ್ಲ ಧರ್ಮಗಳು ಹಾಗೂ ಪಂಥಗಳ ಉತ್ತಮ ಅಂಶಗಳು, ಅಭಿವೃದ್ಧಿಹೊಂದಿದ ದೇಶಗಳ ನಾಗರಿಕ ಸಂಹಿತೆ, ಅಂತರರಾಷ್ಟ್ರೀಯ ಸಮಾವೇಶಗಳ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು 3 ತಿಂಗಳ ಒಳಗೆ ಸಮಗ್ರ ಸ್ವರೂಪದ ಕರಡು ಸಿದ್ಧಪಡಿಸುವಂತೆ ಕಾನೂನು ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಲಾಗಿದೆ. ಸಾರ್ವಜನಿಕ ಚರ್ಚೆ ಹಾಗೂ ಪ್ರತಿಕ್ರಿಯೆಗಳಿಗೆ ಮುಕ್ತ ಅವಕಾಶ ಇರಬೇಕು ಎಂದು ಅರ್ಜಿದಾರರಾದ ವಕೀಲ ಅಭಿನವ್ ಬೇರಿ ಮನವಿ ಮಾಡಿದ್ದಾರೆ. ಭ್ರಾತೃತ್ವ, ಏಕತೆ ಹಾಗೂ ರಾಷ್ಟ್ರೀಯ ಸಮಗ್ರೆಗಾಗಿ ಏಕರೂಪದ ನಾಗರಿಕ ಸಂಹಿತೆ ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಉಪಾಧ್ಯ ಅವರು ಸಲ್ಲಿಸಿರುವ ಅರ್ಜಿಯೂ ವಿಚಾರಣೆಗೆ ಬಾಕಿಯಿದೆ. ಈ ಅರ್ಜಿಯನ್ನು ಪುರಸ್ಕರಿಸದಂತೆ ಒತ್ತಾಯಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಕೋರ್ಟ್ ಮೆಟ್ಟಿಲೇರಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.