ADVERTISEMENT

ಕೋವಿಡ್–19ನಿಂದ ತೊಂದರೆಗೊಳಗಾದವರಿಗೆ ಬಜೆಟ್ ನೆರವಾಗಲಿ: ಟಿಎಸ್‌ಆರ್ ನಾಯಕಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 6:17 IST
Last Updated 1 ಫೆಬ್ರುವರಿ 2021, 6:17 IST
ವಿತ್ತ ಸಚಿವಾಲಯದ ಹೊರಗಡೆ ಟ್ಯಾಬ್ ಪ್ರದರ್ಶಿಸುತ್ತಿರುವ ನಿರ್ಮಲಾ ಸೀತಾರಾಮನ್
ವಿತ್ತ ಸಚಿವಾಲಯದ ಹೊರಗಡೆ ಟ್ಯಾಬ್ ಪ್ರದರ್ಶಿಸುತ್ತಿರುವ ನಿರ್ಮಲಾ ಸೀತಾರಾಮನ್   

ಹೈದರಾಬಾದ್: ಕೋವಿಡ್–19 ಹಾಗೂ ಲಾಕ್‌ಡೌನ್‌ನಿಂದ ತೊಂದರೆಗೊಳಗಾದವರಿಗೆ ನೆರವಾಗುವಂತಹ ಬಜೆಟ್‌ ಮಂಡನೆಯಾಗಬೇಕು ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಪಕ್ಷದ ವಿಧಾನ ಪರಿಷತ್ ಸದಸ್ಯೆ ಕವಿತಾ ಕಲ್ವಕುಂಟ್ಲಾ ಹೇಳಿದ್ದಾರೆ.

‘ನಿರ್ಮಲಾ ಸೀತಾರಾಮನ್‌ ಅವರ ಬಜೆಟ್‌ ಭಾಷಣವನ್ನು ಎದುರು ನೋಡುತ್ತಿದ್ದೇನೆ. 2020ರಲ್ಲಿ ಎದುರಾದ ಸವಾಲು, ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ನಿಂದ ತೊಂದರೆಗೊಳಗಾದವರಿಗೆ ಪ್ರಯೋಜನವಾಗುವಂತಹ ಪ್ರಮುಖ ಪ್ರಕಟಣೆಗಳಿಗಾಗಿ ನಿರೀಕ್ಷಿಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

‘ಹಣಕಾಸಿನ ಸವಾಲು ಇದೆ. 2020ರಲ್ಲಿ ಗಮನಾರ್ಹವಾದ ಸಮಸ್ಯೆಗಳಿಗೆ ತುತ್ತಾದವರಿಗಾಗಿ ಲಾಭದಾಯಕ ನಿರ್ಧಾರಗಳನ್ನು ಪ್ರಬುಧ್ದರೀತಿಯಲ್ಲಿ ಕೈಗೊಳ್ಳಬೇಕು. ಸಾಮಾಜಿಕ ಕಾರ್ಯಗಳಿಗೆ ಮಾಡುವ ಖರ್ಚಿನಲ್ಲಿ ಯಾವುದೇ ಕಡಿತವಾಗುವುದಿಲ್ಲ ಎಂದು ಭಾವಿಸುತ್ತೇನೆ. ಮೂಲಸೌಕರ್ಯ, ಆರೋಗ್ಯ ರಕ್ಷಣೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಮುಂದುವರಿಸಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಮತ್ತು ಉದ್ಯೋಗಿಗಳಿಗೆ ಆದಾಯ ಹೆಚ್ಚಿಸುವ ಸೂಚನೆಗಳನ್ನು ನೀಡಬೇಕಿದೆ’ ಎಂದಿದ್ದಾರೆ.

ADVERTISEMENT

ಭಾರತ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಗದರಹಿತ ಡಿಜಿಟಲ್ ಬಜೆಟ್ ಮಂಡಿಸಲಾಗುತ್ತಿದೆ. ಬಜೆಟ್ ಪ್ರತಿಗಳನ್ನು ಮುದ್ರಿಸಲಾಗುತ್ತಿಲ್ಲ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ಬಳಿಕ ಸಾಫ್ಟ್ ಕಾಪಿಗಳನ್ನು ಸಂಸದರಿಗೆ ಹಂಚಲಾಗುವುದು. ಸಾರ್ವಜನಿಕರು ಆ್ಯಪ್ ಮೂಲಕವೂ ಬಜೆಟ್ ಪ್ರತಿಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.