ಅಹಮದಾಬಾದ್: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆ.13ರಿಂದ 15ರವರೆಗೆ ದೇಶದಾದ್ಯಂತ ಪ್ರತಿಯೊಬ್ಬರೂ ತಮ್ಮ ಮನೆಗಳು, ಅಂಗಡಿಗಳು, ಕೈಗಾರಿಕೆಗಳ ಚಾವಣಿ ಮೇಲೆ ದೇಶದ ಬಾವುಟವನ್ನು ಹಾರಿಸುವಂತೆಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಕರೆ ನೀಡಿದ್ದಾರೆ.
ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಭೋಪಾಲ್ ಮತ್ತು ಘೋಮಾ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಯೋಜನೆಯಿಂದ70 ಸಾವಿರ ಕುಟುಂಬಗಳಿಗೆ ನರ್ಮದಾ ನದಿಯಶುದ್ಧ ನೀರು ಪೂರೈಕೆಯಾಗಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ಈ ಕಾರ್ಯಕ್ರಮವು ಸ್ವಾತಂತ್ರ್ಯಾ ನಂತರ 75 ವರ್ಷಗಳಲ್ಲಿ ದೇಶದ ಅಭಿವೃದ್ಧಿಯ ಬಗ್ಗೆ ಮಕ್ಕಳಲ್ಲಿ ಮತ್ತು ಯುವಕರಲ್ಲಿ ಜಾಗೃತಿ ಮತ್ತು ದೇಶಭಕ್ತಿ ಮೂಡಿಸುವ ಉದ್ದೇಶ ಹೊಂದಿದೆ.‘ಪ್ರತಿ ಮನೆ ಮೇಲೆ ತ್ರಿವರ್ಣ ಧ್ವಜ’ ಅಭಿಯಾನವು ದೇಶಭಕ್ತಿಯ ಹೊಸ ಪ್ರಜ್ಞೆ ಬೇರೂರಿಸುವ ಜತೆಗೆ, ದೇಶವನ್ನು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ಮುಂಚೂಣಿಗೆ ತರುವ ಸಂಕಲ್ಪವನ್ನು ಹೊಂದಿದೆ.ಮೂರು ದಿನಗಳ ಈ ಅಭಿಯಾನದಲ್ಲಿ ಸುಮಾರು 20 ಕೋಟಿಗೂ ಅಧಿಕ ತ್ರಿವರ್ಣ ಧ್ವಜಗಳನ್ನು ಹಾರಿಸಲಾಗುವುದು ಎಂದರು.
ಇದೇ ವೇಳೆ ಶಾ ಅವರು,ತಮ್ಮ ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ₹211 ಕೋಟಿಯ 11 ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.ಅಹಮದಾಬಾದ್ನ ಕಲ್ಪುರ್ ಮತ್ತು ಸಬರಮತಿ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಇದು ಅದ್ದೂರಿಯಾದ ರೂಪ ಪಡೆದುಕೊಳ್ಳಲಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.