ADVERTISEMENT

ಯಾವುದೇ ರಾಜ್ಯಗಳ ಮೇಲೆ ಯಾವುದೇ ಭಾಷಾ ಹೇರಿಕೆ ಇಲ್ಲ: ಸಚಿವ ಪೋಖ್ರಿಯಾಲ್

ಶಿಕ್ಷಣ ನೀತಿಯ ಕುರಿತ ಊಹಾಪೋಹಗಳಿಗೆ ‌ಸ್ಪಷ್ಟನೆ

ಪಿಟಿಐ
Published 2 ಆಗಸ್ಟ್ 2020, 12:45 IST
Last Updated 2 ಆಗಸ್ಟ್ 2020, 12:45 IST
ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ 
ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌    

ಚೆನ್ನೈ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ಮುಖಾಂತರ ಕೇಂದ್ರ ಸರ್ಕಾರವು ಯಾವುದೇ ರಾಜ್ಯಗಳ ಮೇಲೆ ಯಾವುದೇ ಭಾಷೆಯನ್ನು ಹೇರಿಕೆ ಮಾಡುವುದಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಭಾನುವಾರ ತಿಳಿಸಿದರು.

ನೂತನ ಶಿಕ್ಷಣ ನೀತಿಯು ಹಿಂದಿ ಮತ್ತು ಸಂಸ್ಕೃತ ಭಾಷೆಯನ್ನು ಹೇರುತ್ತಿದೆ ಎನ್ನುವ ಕಾರಣದಿಂದ ತಮಿಳುನಾಡಿನಾದ್ಯಂತ ನೀತಿಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ, ನಿಶಾಂಕ್‌ ತಮಿಳು ಭಾಷೆಯಲ್ಲೇ ಟ್ವೀಟ್‌ ಮುಖಾಂತರ ಸ್ಪಷ್ಟನೆ ನೀಡಿದ್ದಾರೆ. ‘ತಮಿಳುನಾಡಿನಲ್ಲಿ ಎನ್‌ಇಪಿ ಅನುಷ್ಠಾನದ ಕುರಿತು ನಾನು ಕೇಂದ್ರದ ಸಚಿವರಾಗಿದ್ದ ಪೊನ್‌ ರಾಧಾಕೃಷ್ಣನ್‌ ಅವರ ಮಾರ್ಗದರ್ಶನವನ್ನು ಬಯಸುತ್ತೇನೆ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಎಂ.ಕೆ.ಸ್ಟಾಲಿನ್‌ ನೇತೃತ್ವದ ಡಿಎಂಕೆ ಪಕ್ಷ ಸೇರಿದಂತೆ ಹಲವು ವಿರೋಧ ಪಕ್ಷಗಳು ಎನ್‌ಇಪಿಯನ್ನು ವಿರೋಧಿಸಿದ್ದು, ಪ್ರಸ್ತಾವಿತ ಬದಲಾವಣೆಗಳ ಪುನರ್‌ಪರಿಶೀಲನೆಗೆ ಆಗ್ರಹಿಸಿವೆ. ‘ಎನ್‌ಇಪಿ ಮುಖಾಂತರ ಹಿಂದಿ ಮತ್ತು ಸಂಸ್ಕೃತದ ಹೇರಿಕೆ ಮಾಡಲಾಗುತ್ತಿದ್ದು, ಸಮಾನ ಮನಃಸ್ಥಿತಿ ಇರುವ ಪಕ್ಷಗಳು ಹಾಗೂ ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೂಡಿ ನೀತಿ ವಿರುದ್ಧ ಹೋರಾಡುತ್ತೇವೆ’ ಎಂದು ಸ್ಟಾಲಿನ್‌ ಶನಿವಾರ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.