ನವದೆಹಲಿ: ‘ಜಾತ್ಯತೀತ ಪ್ರಜಾಪ್ರಭುತ್ವದಲ್ಲಿ ಹಲಾಲ್ ವ್ಯವಹಾರವು ಸಂವಿಧಾನ ವಿರೋಧಿಯಷ್ಟೇ ಅಲ್ಲ, ದೇಶದ್ರೋಹ’ ಎಂದಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್, ‘ಉತ್ತರ ಪ್ರದೇಶದಲ್ಲಿ ನಿಷೇಧಿಸಿರುವಂತೆ ಬಿಹಾರದಲ್ಲೂ ನಿಷೇಧಿಸಿ’ ಎಂದು ಆಗ್ರಹಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ಗೆ ಪತ್ರ ಬರೆದಿದ್ದಾರೆ.
‘ಇಸ್ಲಾಂಗೆ ಸಂಬಂಧವಿಲ್ಲದ ವಿಷಯಗಳನ್ನು ಇಸ್ಲಾಮೀಕರಣ ಮಾಡಲಾಗುತ್ತಿದೆ. ಕೆಲವು ಸಂಸ್ಥೆಗಳು ಹಲಾಲ್ ಪ್ರಮಾಣಪತ್ರ ನೀಡುವುದಾಗಿ ಸ್ವಯಂ ಘೋಷಿಸಿಕೊಂಡಿವೆ. ಹೆಚ್ಚು ಹಣ ಪಾವತಿಸುವ ಕಂಪನಿಗಳಿಗೆ ಪ್ರಮಾಣಪತ್ರ ನೀಡುತ್ತಿವೆ. ಬಿಹಾರದಲ್ಲೂ ಹಲಾಲ್ ಉತ್ಪನ್ನಗಳ ಹೆಸರಿನಲ್ಲಿ ನಡೆಯುತ್ತಿರುವ ಜಿಹಾದ್ಗೆ ನಿಷೇಧ ಹೇರಬೇಕಿದೆ’ ಎಂದಿದ್ದಾರೆ.
‘ಖಾದ್ಯ ತೈಲ, ಕುರುಕಲು ತಿನಿಸು, ಡ್ರೈಫ್ರೂಟ್ಸ್, ಸಿಹಿತಿನಿಸು, ಸೌಂದರ್ಯವರ್ಧಕ, ಔಷಧಿ, ವೈದ್ಯಕೀಯ ಉಪಕರಣ ಸೇರಿದಂತೆ ಅನೇಕ ಆಹಾರ ವಸ್ತುಗಳು ಹಾಗೂ ಅವಶ್ಯಕ ವಸ್ತುಗಳ ವ್ಯಾಪಾರವು ಬಿಹಾರದಲ್ಲಿ ಹಲಾಲ್ ಹೆಸರಿನಲ್ಲಿ ನಡೆಯುತ್ತಿದೆ ಎಂಬುದು ತಿಳಿದುಬಂದಿದೆ. ಆದರೆ ಇವುಗಳನ್ನು ಪ್ರಮಾಣೀಕರಿಸಿ, ಪ್ರಮಾಣಪತ್ರ ನೀಡುವ ಕೆಲಸವನ್ನು ಎಫ್ಎಸ್ಎಸ್ಎಐ ಮಾತ್ರ ಮಾಡಲಿದೆ’ ಎಂದು ಉಲ್ಲೇಖಿಸಿದ್ದಾರೆ.
‘ಜಗತ್ತಿನಾದ್ಯಂತ ಹಲಾಲ್ ಪ್ರಮಾಣೀಕರಣಕ್ಕೆ ಸಂಬಂಧಿಸಿದ ವ್ಯಾಪಾರದ ಗಾತ್ರ ಅಂಕಿ–ಅಂಶಗಳ ಪ್ರಕಾರ ಸುಮಾರು ₹ 166 ಲಕ್ಷ ಕೋಟಿಯಷ್ಟಿದೆ. ಈ ಆರ್ಥಿಕತೆಯ ಸಂಪರ್ಕವು ಭಯೋತ್ಪಾದಕ ಚಟುವಟಿಕೆಗಳೊಂದಿಗೆ ಬೆಸೆದುಕೊಂಡಿರುವುದು ಗೊತ್ತಾಗಿದ್ದು, ಇದನ್ನು ಕೂಲಂಕಷವಾಗಿ ತನಿಖೆ ಮಾಡಬೇಕಿದೆ’ ಎಂದು ಸಚಿವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.