ADVERTISEMENT

ಉನ್ನಾವ್ ಸಂತ್ರಸ್ತೆ ವಿರುದ್ಧದ ಪ್ರಕರಣ: ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಇಲ್ಲ

ಪಿಟಿಐ
Published 13 ಆಗಸ್ಟ್ 2019, 20:15 IST
Last Updated 13 ಆಗಸ್ಟ್ 2019, 20:15 IST
   

ನವದೆಹಲಿ: ಉನ್ನಾವ್‌ ಅತ್ಯಾಚಾರ ಸಂತ್ರಸ್ತೆ ಮತ್ತು ಅವರ ಕುಟುಂಬದ ವಿರುದ್ಧ ದಾಖಲಾಗಿರುವ 20 ಪ್ರಕರಣಗಳ ವಿಚಾರದಲ್ಲಿ ಉತ್ತರ ಪ್ರದೇಶ ಸರ್ಕಾರಕ್ಕೆ ಯಾವುದೇ ನಿರ್ದೇಶನ ಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಈ ಪ್ರರಕಣಗಳ ವ್ಯಾಪ್ತಿಯನ್ನು ವಿಸ್ತರಿಸಲು ಬಯಸುವುದಿಲ್ಲ ಮತ್ತು ಪ್ರಕರಣಗಳಲ್ಲಿ ಮಧ್ಯಪ್ರವೇಶ ನಡೆಸುವುದಿಲ್ಲ ಎಂದು ದ್ವಿಸದಸ್ಯ ಪೀಠ ತಿಳಿಸಿದೆ.

ಉತ್ತರ ಪ್ರದೇಶದಿಂದ ದೆಹಲಿಯ ನ್ಯಾಯಾಲಯಕ್ಕೆ ವರ್ಗಾವಣೆಯಾಗಿರುವ ನಾಲ್ಕು ಪ್ರಕರಣಗಳ ವಿಚಾರಣೆ ನಿತ್ಯವೂ ನಡೆಯಲಿದೆ ಎಂದು ಪೀಠಕ್ಕೆ ವಕೀಲರು ತಿಳಿಸಿದರು.

ADVERTISEMENT

2017ರ ಅತ್ಯಾಚಾರ ಪ್ರಕರಣ, ಅತ್ಯಾಚಾರ ಸಂತ್ರಸ್ತೆಯ ತಂದೆಯ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣ, ಪೊಲೀಸ್‌ ಕಸ್ಟಡಿಯಲ್ಲಿ ಅವರ ಸಾವಿನ ಪ್ರಕರಣ ಮತ್ತು ಸಂತ್ರಸ್ತೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ತೀಸ್‌ ಹಜಾರಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

ಬಿಜೆಪಿಯ ಶಾಸಕ ಕುಲದೀಪ್‌ ಸೆಂಗರ್‌ ಅವರು 2017ರಲ್ಲಿ ಅತ್ಯಾಚಾರ ಎಸಗಿದ್ದರು. ಆಗ, ಸಂತ್ರಸ್ತೆಯು ಬಾಲಕಿಯಾಗಿದ್ದಳು. ಸಂತ್ರಸ್ತೆಯು ಇತ್ತೀಚೆಗೆ ಪ‍್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಕಾರಣ ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೆಂಗರ್‌ ವಿರುದ್ಧ ಆರೋಪ ನಿಗದಿ

ಸಂತ್ರಸ್ತೆಯ ತಂದೆಯ ವಿರುದ್ಧ ಪ್ರಕರಣ ದಾಖಲಿಸಿ ಅವರು ಕಸ್ಟಡಿಯಲ್ಲಿ ಸಾವನ್ನಪ್ಪಲು ಕಾರಣವಾದ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಮೂವರು ಪೊಲೀಸರಿಗೆ ನೀಡಲಾಗಿದ್ದ ಜಾಮೀನನ್ನು ನ್ಯಾಯಾಲಯವು ರದ್ದುಪಡಿಸಿದೆ. ತೀಸ್‌ ಹಜಾರಿ ಜಿಲ್ಲಾ ನ್ಯಾಯಾಧೀಶ ಧರ್ಮೇಶ್‌ ಶರ್ಮಾ ಈ ಆದೇಶ ನೀಡಿದ್ದಾರೆ.

ಸಂತ್ರಸ್ತೆಯ ತಂದೆಯ ಸಾವಿನ ಪ್ರಕರಣದಲ್ಲಿ ಬಿಜೆಪಿಯ ಉಚ್ಚಾಟಿತ ಶಾಸಕ, ಆರೋಪಿ ಕುಲದೀಪ್‌ ಸೆಂಗರ್‌ ಮತ್ತು ಇತರರ ವಿರುದ್ಧ ನ್ಯಾಯಾಲಯವು ಆರೋಪ ನಿಗದಿ ಮಾಡಿದೆ.

ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಸಂತ್ರಸ್ತೆಯ ತಂದೆಯನ್ನು ಸಿಲುಕಿಸಿದ ಹಾಗೂ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿಯೂ ಸೆಂಗರ್‌ ಸೇರಿ ಹತ್ತು ಆರೋಪಿಗಳ ವಿರುದ್ಧ ಆರೋಪ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.