ADVERTISEMENT

ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರೆ, ನಮಗೂ ಅದೇ ಗತಿಯೇ: ವಿದ್ಯಾರ್ಥಿನಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:31 IST
Last Updated 1 ಆಗಸ್ಟ್ 2019, 19:31 IST
   

ಲಖನೌ: ಉತ್ತರ ಪ್ರದೇಶ ಪೊಲೀಸರು ರಾಜ್ಯದ ಶಾಲೆಗಳಲ್ಲಿ ನಡೆಸುತ್ತಿರುವ ‘ಬಾಲಿಕಾ ಸುರಕ್ಷಾ ಜಾಗೃತ ಅಭಿಯಾನ’ದ ವೇಳೆ ಮುಜುಗರ ಅನುಭವಿಸಿದ್ದಾರೆ.

ಈ ಕಾರ್ಯಕ್ರಮದ ಅಂಗವಾಗಿ ಉತ್ತರ ಪ್ರದೇಶ ಉತ್ತರ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್‌.ಎಸ್‌.ಗೌತಮ್ ಅವರು ಬಾರಾಬಂಕಿಯ ಶಾಲೆಯಲ್ಲಿ ಉಪನ್ಯಾಸ ನೀಡುತ್ತಿದ್ದರು. ‘ಬಾಲಕಿಯರು ತೀರಾ ಜಾಗೃತರಾಗಿರಬೇಕು. ತಮ್ಮ ಮೇಲೆ ಆಗುವ ಯಾವುದೇ ದೌರ್ಜನ್ಯದ ಬಗ್ಗೆ ಗಟ್ಟಿಯಾಗಿ ಮಾತನಾಡಬೇಕು’ ಎಂದು ಅವರು ಹೇಳಿದರು.

ಅವರ ಮಾತನ್ನು ಮಧ್ಯದಲ್ಲೇ ತಡೆದು, ವಿದ್ಯಾರ್ಥಿನಿಯೊಬ್ಬರು ಪ್ರಶ್ನೆ ಮುಂದಿಟ್ಟರು. ‘ನಾವು ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರೆ, ಉನ್ನಾವ್ ಅತ್ಯಾಚಾರ ಸಂತ್ರಸ್ತೆಗೆ ಆದ ಗತಿಯೇ ನಮಗೂ ಆಗುತ್ತದೆಯೇ? ನಮಗೂ ಅಪಘಾತವಾಗುತ್ತದೆಯೇ? ನಾವು ಪ್ರತಿಭಟನೆ ನಡೆಸುವ ಮೂಲಕ ನ್ಯಾಯ ಪಡೆಯಬಹುದು ಎಂದು ನೀವು ಹೇಳುತ್ತಿದ್ದೀರಾ? ಅತ್ಯಾಚಾರದ ವಿರುದ್ಧ ಹೋರಾಡಿದ ಆ ಬಾಲಕಿ ಈಗ ಜೀವಕ್ಕಾಗಿ ಹೋರಾಡುತ್ತಿದ್ದಾಳೆ’ ಎಂದು ವಿದ್ಯಾರ್ಥಿನಿ ಹೇಳಿದರು.

ಈ ಮಾತಿಗೆ ಪ್ರತಿಕ್ರಿಯೆ ನೀಡಲು ಪೊಲೀಸ್ ಅಧಿಕಾರಿ ತಡವರಿಸಿದರು. ‘ಸಹಾಯವಾಣಿಗೆ ಬರುವ ಎಲ್ಲಾ ದೂರುಗಳಿಗೂ ನಾವು ಸ್ಪಂದಿಸುತ್ತೇವೆ’ ಎಂದಷ್ಟೇ ಹೇಳಿ ಉಪನ್ಯಾಸ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.