ADVERTISEMENT

ನ್ಯಾಯಾಂಗ ನಿಂದನೆ ಪ್ರಕರಣ: ಎನ್‌ಜಿಎ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 12:39 IST
Last Updated 7 ಅಕ್ಟೋಬರ್ 2021, 12:39 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿಯಾಗಿ ₹ 25 ಲಕ್ಷವನ್ನು ಕೋರ್ಟ್‌ ವೆಚ್ಚವಾಗಿ ಠೇವಣಿ ಇಡದಿರುವ ಕಾರಣಕ್ಕೆ ಎನ್‌ಜಿಒವೊಂದರ ಅಧ್ಯಕ್ಷರನ್ನು ಸುಪ್ರೀಂ ಕೋರ್ಟ್‌ ಗುರುವಾರ ತರಾಟೆಗೆ ತೆಗೆದುಕೊಂಡಿದೆ.

‘ನಿಮ್ಮ ತಪ್ಪಿಗೆ ಇನ್ನೂ ಪಾಠ ಕಲಿತಿಲ್ಲ. ಅನುಚಿತವಾಗಿ ವರ್ತಿಸಲು ನಿಮಗೆ ನಾವು ಆಸ್ಪದ ಕೊಡುವುದಿಲ್ಲ’ ಎಂಬ ಎಚ್ಚರಿಕೆಯನ್ನೂ ಕೋರ್ಟ್‌ ನೀಡಿದೆ.

‘ನ್ಯಾಯ ಪೀಠ ಅಥವಾ ಇತರರಿಗೆ ಬೆದರಿಕೆ ಹಾಕಿ, ಸರ್ಕಾರಕ್ಕೆ ಬೆದರಿಕೆ ಹಾಕಿ, ಎಲ್ಲರನ್ನು ಬೆದರಿಸುವ ಮೂಲಕ ನೀವು ಜನರನ್ನು ಪ್ರಕರಣ ಹಿಂತೆಗೆದುಕೊಳ್ಳುವಂತೆ ಮಾಡಬಹುದು ಎಂದು ಭಾವಿಸಿದ್ದೀರಿ. ನೀವು ಆ ರೀತಿ ಕೂಡ ಹೇಳಿಕೊಂಡಿದ್ದೀರಿ. ಕೆಟ್ಟದಾಗಿ ನಡೆದುಕೊಳ್ಳುವ ಮೂಲಕ ಜನರ ಮೇಲೆ ಹಿಡಿತ ಸಾಧಿಸಲು ಬಯಸುತ್ತಿದ್ದೀರಿ. ಈ ರೀತಿ ವರ್ತಿಸಲು ನಾವು ನಿಮಗೆ ಅವಕಾಶ ನೀಡುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ.

ADVERTISEMENT

ನ್ಯಾಯಾಲಯವನ್ನು ಅವಹೇಳನ ಮಾಡಿದ ಮತ್ತು ನ್ಯಾಯಾಲಯವನ್ನು ಹಗರಣಗೊಳಿಸಲು ಯತ್ನಿಸಿದ ಕಾರಣಕ್ಕೆ ಎನ್‌ಜಿಒ ‘ಸೂರಜ್‌ ಇಂಡಿಯಾ ಟ್ರಸ್ಟ್‌’ ಅಧ್ಯಕ್ಷ ರಾಜೀವ್‌ ದೈಯಾ ಅವರಿಗೆ ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಎಂ.ಎಂ. ಸುಂದ್ರೇಶ್ ಅವರಿರುವ ಪೀಠವು ಈ ಎಚ್ಚರಿಕೆ ನೀಡಿದೆ.

‘ನ್ಯಾಯಾಲಯವನ್ನು ಬೇಷರತ್‌ ಕ್ಷಮೆ ಕೋರಿದ್ದೇನೆ. ನ್ಯಾಯಾಲಯ ನನಗೆ ದಯೆ ತೋರಿದೆ’ ಎಂದು ರಾಜೀವ್‌ ದೈಯಾ ಪೀಠದ ಗಮನಕ್ಕೆ ತಂದಾಗ, ‘ನಾವು ಶಿಕ್ಷೆ ವಿಧಿಸುವುದನ್ನು ಮುಂದೂಡುತ್ತೇವೆ. ನೀವು ಹೇಗೆ ವರ್ತಿಸುತ್ತೀರಿ ಎಂದು ಕಾದು ನೋಡುವೆವು. ಜನವರಿವರೆಗೆ ಮುಂದೂಡಿದ್ದೇವೆ’ ಎಂದ ಪೀಠವು, ಮುಂದಿನ ವರ್ಷದ ಜನವರಿ 11ಕ್ಕೆ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.