ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ
ಎಕ್ಸ್ ಖಾತೆ: @kpmaurya1
ಲಖನೌ: ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಗುರಿಯಾಗಿಸಿ ಸಮಾಜವಾದಿ ಪಕ್ಷದ ನಾಯಕ ರಾಮ್ಗೋಪಾಲ್ ಯಾದವ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ನಡುವೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಯಾದವ್ ವಿರುದ್ಧ ಕಿಡಿಕಾರಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೌರ್ಯ, ದಲಿತರನ್ನು ನಿರಂತರವಾಗಿ ನಿಂದಿಸುತ್ತ ಬಂದಿದ್ದ ಯಾದವ್, ಈ ವಯಸ್ಸಿನಲ್ಲೂ ದಲಿತರನ್ನು ಕೀಳಾಗಿ ಕಾಣುವುದನ್ನು ನಿಲ್ಲುಸುತ್ತಿಲ್ಲ ಎಂದು ಹೇಳಿದ್ದಾರೆ.
ಆಪರೇಷನ್ ಸಿಂಧೂರ ಕುರಿತ ಪತ್ರಿಕಾಗೋಷ್ಠಿಗಳಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಕರ್ನಲ್ ಸೋಫಿಯಾ ಖುರೇಷಿ ಅವರೊಂದಿಗೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಕಾಣಿಸಿಕೊಂಡಿದ್ದರು.
ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ಸೋಫಿಯಾ ವಿರುದ್ಧ ನೀಡಿದ್ದ ಆಕ್ಷೇಪಾರ್ಹ ಹೇಳಿಕೆ ಉಲ್ಲೇಖಿಸಿ, ಯಾದವ್ ಮೊರಾದಾಬಾದ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದರು. ಈ ವೇಳೆ ವ್ಯೋಮಿಕಾ ಸಿಂಗ್ ಯಾರೆಂದು ತಿಳಿದಿರಲಿಲ್ಲ ಹಾಗೂ ಏರ್ ಮಾರ್ಷಲ್ ಎ.ಕೆ. ಭಾರ್ತಿ ಬಗ್ಗೆಯೂ ಗೊತ್ತಿರಲಿಲ್ಲ. ಇಲ್ಲದಿದ್ದರೆ ಜನರು ಅವರನ್ನೂ ನಿಂದಿಸುತ್ತಿದ್ದರು ಎಂದು ಹೇಳಿದ್ದಾರೆ.
ವ್ಯೋಮಿಕಾ ಸಿಂಗ್ ಹರಿಯಾಣದ ಜಾತವ್ ಸಮುದಾಯಕ್ಕೆ ಸೇರಿದವರು, ಏರ್ ಮಾರ್ಷಲ್ ಭಾರ್ತಿ ಬಿಹಾರದ ಪೂರ್ಣಿಯ ಜಿಲ್ಲೆಯ ಯಾದವ್ ಸಮುದಾಯಕ್ಕೆ ಸೇರಿದವರ ಎಂದು ಯಾದವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.