ಲಖನೌ: ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಮೋದಿನಗರದಲ್ಲಿ ಮನೆ ಮಾಲೀಕನೊಬ್ಬ ಪಿಎಚ್.ಡಿ. ಅಧ್ಯಯನ ಮಾಡುತ್ತಿದ್ದ ಬಾಡಿಗೆದಾರನನ್ನು ಕೊಲೆಗೈದು ಆತನ ದೇಹವನ್ನು ನಾಲ್ಕು ತುಂಡುಗಳನ್ನಾಗಿ ಕತ್ತರಿಸಿ ವಿವಿಧೆಡೆ ಎಸೆದಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಅಂಕಿತ್ ಖೋಕರ್ ಎಂದು ಗುರುತಿಸಲಾಗಿದೆ. ಆರೋಪಿ ಉಮೇಶ್ ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ತಿಂಗಳ ಹಿಂದೆ ಉಮೇಶ್ ಈ ಕೃತ್ಯ ಎಸಗಿದ್ದಾನೆ. ಆತನ ಗೆಳೆಯನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಂಕಿತ್ ತನ್ನ ಪೂರ್ವಜರ ಆಸ್ತಿಯನ್ನು ₹1 ಕೋಟಿಗೆ ಮಾರಾಟ ಮಾಡಿರುವ ವಿಚಾರ ತಿಳಿದು ಹಣಕ್ಕಾಗಿ ಉಮೇಶ್ ಈ ಕೃತ್ಯ ಎಸಗಿದ್ದಾನೆ ಎಂದಿದ್ದಾರೆ.
‘ಉಮೇಶ್ ಅಂಕಿತ್ನನ್ನು ಕತ್ತು ಹಿಸುಕಿ ಸಾಯಿಸಿ, ಬಳಿಕ ಗರಗಸದಿಂದ ಆತನ ದೇಹವನ್ನು ತುಂಡರಿಸಿದ್ದಾನೆ. ಕೈ ಮತ್ತು ಕಾಲುಗಳನ್ನು ದಸ್ನಾ ಬಳಿಯ ಗಂಗಾ ನದಿಯ ಕಾಲುವೆಗೆ ಎಸೆದಿದ್ದು, ತಲೆಯನ್ನು ಎಕ್ಸ್ಪ್ರೆಸ್ ಹೆದ್ದಾರಿಯ ಬಳಿ ಹಾಗೂ ದೇಹದ ಇತರ ಭಾಗಗಳನ್ನು ಮುಜಾಫರ್ ಜಿಲ್ಲೆಯ ಖತೌಲಿಯಲ್ಲಿ ಎಸೆದಿದ್ದಾನೆ’ ಎಂದೂ ವಿವರಿಸಿದ್ದಾರೆ.
ಉಮೇಶ್ ಈ ಹಿಂದೆ ಮೂಳೆ ಚಿಕಿತ್ಸಾಲಯದಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡಿದ್ದ. ಅಲ್ಲಿ ಗರಗಸ ಬಳಕೆ ಮಾಡುವುದನ್ನು ಕಲಿತಿದ್ದ ಎಂದೂ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.