ADVERTISEMENT

UP Elections 2022: ಕಾಂಗ್ರೆಸ್‌ನಿಂದ ಯುವ ಪ್ರಣಾಳಿಕೆ ಬಿಡುಗಡೆ

ಪಿಟಿಐ
Published 21 ಜನವರಿ 2022, 9:29 IST
Last Updated 21 ಜನವರಿ 2022, 9:29 IST
ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಹುಲ್ ಗಾಂಧಿ
ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಹುಲ್ ಗಾಂಧಿ   

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವಂತೆಯೇ ಯುವ ಜನಾಂಗವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಪಕ್ಷವು 'ಭರ್ತಿ ವಿಧಾನ್' (ನೇಮಕಾತಿ ವಿಧಾನ) ಎಂಬ ಯುವ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆಗೊಳಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಯುವ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ಕಾಂಗ್ರೆಸ್‌ನಿಂದ ಮಾತ್ರ ರಾಜ್ಯದಲ್ಲಿರುವ ಯುವ ಜನಾಂಗಕ್ಕೆ ಹೊಸ ದೃಷ್ಟಿಕೋನ ನೀಡಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, 'ಇದು ಪೊಳ್ಳು ಭರವಸೆಗಳಲ್ಲ, ಬದಲಾಗಿ ಯುವಕರನ್ನು ಸಂಪರ್ಕಿಸಿ ರಚಿಸಲಾಗಿದೆ' ಎಂದು ಹೇಳಿದ್ದಾರೆ.

'ಉತ್ತರ ಪ್ರದೇಶದ ಯುವ ಜನಾಂಗಕ್ಕೆ ದೂರದೃಷ್ಟಿ ಬೇಕಾಗಿದೆ. ಕಾಂಗ್ರೆಸ್‌ಗೆ ಮಾತ್ರ ಅದನ್ನು ನೀಡಲು ಸಾಧ್ಯ. ನಾವು ದ್ವೇಷವನ್ನು ಹರಡುವುದಿಲ್ಲ, ಜನರನ್ನು ಒಗ್ಗೂಡಿಸುತ್ತೇವೆ. ಯುವ ಶಕ್ತಿಯೊಂದಿಗೆ ಹೊಸ ಉತ್ತರ ಪ್ರದೇಶವನ್ನು ರಚಿಸಲು ಬಯಸುತ್ತೇವೆ' ಎಂದು ಹೇಳಿದರು.

'ನೇಮಕಾತಿಯು ರಾಜ್ಯದ ಅತಿ ದೊಡ್ಡ ಸಮಸ್ಯೆಯಾಗಿದ್ದು, ಯುವ ಜನಾಂಗವು ನಿರಾಶೆಗೂಂಡಿದ್ದಾರೆ' ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.

'ಉತ್ತರ ಪ್ರದೇಶದಲ್ಲಿ ಜಾತಿ ರಾಜಕಾರಣ ಅಥವಾ ಕೋಮುವಾದದ ನಕಾರಾತ್ಮಕ ಪ್ರಚಾರವಲ್ಲ. ತಮ್ಮ ಪಕ್ಷವು ಅಭಿವೃದ್ಧಿಯತ್ತ ಗಮನ ಹರಿಸಲು ಬಯಸುತ್ತದೆ' ಎಂದು ಹೇಳಿದರು.

ಯುವ ಜನಾಂಗ ಹಾಗೂ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್ ಮುಂದಾಗಿದೆ. ಅಲ್ಲದೆ ಶೇ 40ರಷ್ಟು ಸೀಟುಗಳನ್ನು ಮಹಿಳೆಯರಿಗೆ ನೀಡಲು ನಿರ್ಧರಿಸಿದೆ.

403 ಸದಸ್ಯ ಬಲದ ಉತ್ತರ ಪ್ರದೇಶದಲ್ಲಿ ಫೆಬ್ರುವರಿ 10ರಿಂದ ಮಾರ್ಚ್ 7ರ ವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.