ನವದೆಹಲಿ: ಕೇಂದ್ರ ಸಾರ್ವಜನಿಕ ಸೇವಾ ಆಯೋಗವು (ಯುಪಿಎಸ್ಸಿ) ಸಾರ್ವಜನಿಕ ಪ್ರಕಟಣಾ ಯೋಜನೆ (ಪಿಡಿಎಸ್)ಯನ್ನು ‘ಪ್ರತಿಭಾ ಸೇತು’ ಯೋಜನೆ ಎಂದು ಮರುನಾಮಕರಣ ಮಾಡಿದೆ.
ಈ ಯೋಜನೆಯು ಯುಪಿಎಸ್ಸಿ ನಡೆಸುವ ಎಲ್ಲ ಹಂತದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿಯೂ ಅಂತಿಮ ಸುತ್ತಿಗೆ ಆಯ್ಕೆಯಾಗದ ಪ್ರತಿಭಾನ್ವಿತ ಅಭ್ಯರ್ಥಿಗಳೊಂದಿಗೆ ಉದ್ಯೋಗದಾತರನ್ನು ಸಂಪರ್ಕಿಸಲು ಅನುವು ಮಾಡಿಕೊಡುವ ಗುರಿಯನ್ನು ಹೊಂದಿದೆ. ಅಲ್ಲದೇ, ಶಿಫಾರಸು ಮಾಡಿದ ಈ ಅಭ್ಯರ್ಥಿಗಳನ್ನು ಹೆಚ್ಚು ಅರ್ಹರೆಂದು ಪರಿಗಣಿಸಲು ಮತ್ತು ನೇಮಕ ಮಾಡಿಕೊಳ್ಳಲು ಉದ್ಯೋಗದಾತರಿಗೆ ಅವಕಾಶ ಕಲ್ಪಿಸುವ ಒಂದು ವೇದಿಕೆಯಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಈ ಹಿಂದೆ ಪಿಡಿಎಸ್ ಯೋಜನೆಯಡಿ ಆಯೋಗದ ವೆಬ್ಸೈಟ್ನಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತಿತ್ತು. ಅದರಲ್ಲಿ ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ ಮತ್ತು ಸಂಪರ್ಕ ವಿವರ ಸೇರಿದಂತೆ ‘ಸಾಫ್ಟ್ ಬಯೋಡೇಟಾ’ವನ್ನು ಒದಗಿಸಲಾಗುತ್ತಿತ್ತು.
ಈಗ ಆಯೋಗದಿಂದ ಆಯ್ಕೆಯಾಗದ ಅಭ್ಯರ್ಥಿಗಳನ್ನು ಸ್ವಯಂಪ್ರೇರಿತವಾಗಿ ಆಯ್ಕೆ/ನೇಮಕಾತಿ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುವಂತೆ ಸಂಸ್ಥೆಗಳಿಗೆ ಲಾಗಿನ್ ಐಡಿ ಒದಗಿಸಲಾಗುತ್ತದೆ. ಖಾಸಗಿ ಸಂಸ್ಥೆಗಳು ಆಯೋಗದ ಪೋರ್ಟಲ್ ಬಳಸಿಕೊಂಡು ನೋಂದಣಿ ಮಾಡಿಕೊಳ್ಳಬಹುದು ಎಂದು ಯುಪಿಎಸ್ಸಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.