ಚೆನ್ನೈ: ‘ದೇಶದ ಹೈಕೋರ್ಟ್ಗಳಲ್ಲಿ ಸ್ಥಳೀಯ ಪ್ರಾದೇಶಿಕ ಭಾಷೆಗಳನ್ನು ಬಳಸುವುದಕ್ಕೆ ಕೆಲವು ಅಡೆತಡೆಗಳಿದ್ದು, ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯಂಥ (ಎಐ) ತಂತ್ರಜ್ಞಾನದಿಂದ ಪರಿಹಾರ ದೊರೆಯುವ ಸಾಧ್ಯತೆ ಇದೆ’ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ. ರಮಣ ಅವರು ಶನಿವಾರ ವಿಶ್ವಾಸ ವ್ಯಕ್ತಪಡಿಸಿದರು.
ಮದ್ರಾಸ್ ಹೈಕೋರ್ಟ್ನ 9 ಅಂತಸ್ತಿನ ಆಡಳಿತಾತ್ಮಕ ಬ್ಲಾಕ್ಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಹೈಕೋರ್ಟ್ನಲ್ಲಿ ತಮಿಳು ಭಾಷೆ ಬಳಸಲು ಅವಕಾಶ ನೀಡುವಂತೆ ಕೋರಿದ ಮನವಿಗೆ ಪ್ರತಿಕ್ರಿಯಿಸಿದ ಅವರು, ‘ಸಂವಿಧಾನದ 348ನೇ ವಿಧಿಯ ಪ್ರಕಾರ ಹೈಕೋರ್ಟ್ಗಳಲ್ಲಿ ವಿಚಾರಣೆ ವೇಳೆ ಸ್ಥಳೀಯ ಭಾಷೆಯ ಬಳಕೆಗೆ ಅವಕಾಶ ನೀಡುವಂತೆ ವಿವಿಧ ಪ್ರದೇಶಗಳಿಂದ ಕಾಲಕಾಲಕ್ಕೆ ಬೇಡಿಕೆಗಳು ಬಂದಿವೆ. ಈ ಕುರಿತು ಇರುವ ಅಡೆತಡೆಗಳು ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯಂಥ ತಂತ್ರಜ್ಞಾನದ ಬಳಕೆಯಿಂದ ನಿವಾರಣೆಯಾಗುವ ವಿಶ್ವಾಸವಿದೆ’ ಎಂದರು.
‘ದೇಶದಲ್ಲಿ ಸಾಂಸ್ಕೃತಿಕ ಮತ್ತು ಭಾಷಾ ಹಕ್ಕುಗಳನ್ನು ರಕ್ಷಿಸುವಲ್ಲಿ ತಮಿಳು ಜನರು ಯಾವಾಗಲೂ ಮುಂಚೂಣಿಯಲ್ಲಿದ್ದಾರೆ. ತಮಿಳಿಗರು ತಮ್ಮ ಭಾಷೆ, ಆಹಾರ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದಾರೆ. ಇಂದಿಗೂ ಭಾರತದ ಭಾಷಾ ವೈವಿಧ್ಯತೆಯ ಬಗ್ಗೆ ಯೋಚಿಸಿದಾಗ, 60ರ ದಶಕದಲ್ಲಿ ತಮಿಳುನಾಡಿನಲ್ಲಿ ನಡೆದ ಹಿಂದಿ ವಿರೋಧಿ ಆಂದೋಲನದ ಹೋರಾಟವು ನೆನಪಿಗೆ ಬರುತ್ತದೆ’ ಎಂದೂ ಮುಖ್ಯ ನ್ಯಾಯಮೂರ್ತಿಗಳು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ದಕ್ಷಿಣದ ರಾಜ್ಯಗಳ ಅನುಕೂಲಕ್ಕಾಗಿ ಚೆನ್ನೈನಲ್ಲಿ ಸುಪ್ರೀಂಕೋರ್ಟ್ನ ಪೀಠವನ್ನು ಸ್ಥಾಪಿಸಲು ಸಿಜೆಐಗೆ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.