ADVERTISEMENT

ಬೇರೆಯವನೊಂದಿಗೆ ವಿವಾಹ: ಮದುವೆ ಮಂಟಪದಲ್ಲೇ ವಧುವನ್ನು ಗುಂಡಿಕ್ಕಿ ಕೊಂದ ಪ್ರಿಯಕರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಏಪ್ರಿಲ್ 2022, 12:32 IST
Last Updated 29 ಏಪ್ರಿಲ್ 2022, 12:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಥುರಾ: ಮದುವೆ ಸಮಾರಂಭದಲ್ಲಿ ಪ್ರಿಯಕರನೊಬ್ಬ ವಧುವಿಗೆ ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

ಬೇರೆ ಪುರುಷನೊಂದಿಗೆ ವಿವಾಹವಾಗುತ್ತಿದ್ದಾಳೆ ಎಂಬ ಕಾರಣಕ್ಕೆ ಆಕ್ರೋಶಗೊಂಡಿದ್ದ ಆಕೆಯ ಪ್ರಿಯಕರ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಈ ಅಮಾನವೀಯ ಘಟನೆಯು ಮಥುರಾದ ಮುಬಾರಿಕ್‌ಪುರ ಗ್ರಾಮದ ನೌಜಿಲ್ ಪ್ರದೇಶದಲ್ಲಿ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ADVERTISEMENT

ಹಿಂದೂ ಸಂಪ್ರದಾಯದ ಪ್ರಕಾರ ನಡೆದ 'ಜೈ ಮಾಲಾ' ಕಾರ್ಯಕ್ರಮ ಮುಗಿದ ಕೂಡಲೇ ಕಾಜಲ್‌ರನ್ನು(ವಧು) ಗುಂಡಿಕ್ಕಿ ಕೊಲ್ಲಲಾಗಿದೆ. ಆರೋಪಿಯು ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದನು. ಆಕೆಯು ಬೇರೊಬ್ಬ ಪುರುಷನೊಂದಿಗೆ ವಿವಾಹವಾಗುವುದು ಆತನಿಗೆ ಇಷ್ಟವಿರಲಿಲ್ಲ ಎಂದು ವರದಿಯಾಗಿದೆ.

ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂತ್ರಸ್ತೆಯ ತಂದೆ ಖುಬಿ ರಾಮ್ ಪ್ರಜಾಪತಿ, 'ಜೈ ಮಾಲಾ' ಕಾರ್ಯಕ್ರಮ ಮುಗಿದ ನಂತರ ನನ್ನ ಮಗಳು ರಿಫ್ರೆಶ್‌ ಆಗಲು ಕೋಣೆಗೆ ಹೋಗಿದ್ದಳು. ಅಲ್ಲಿಗೆ ನುಗ್ಗಿದ ಅಪರಿಚಿತ ವ್ಯಕ್ತಿ ಆಕೆಯನ್ನು ಗುಂಡಿಕ್ಕಿ ಕೊಂದಿದ್ದಾನೆ’ ಎಂದು ತಿಳಿಸಿದ್ದಾರೆ.

ಈ ಘಟನೆ ನಡೆದ ನಂತರ ಸಂತ್ರಸ್ತೆಯ ತಂದೆ ದೂರು ದಾಖಲಿಸಿದ್ದಾರೆ.

‘ನಾವು ದೂರು ದಾಖಲಿಸಿಕೊಂಡಿದ್ದೇವೆ. ಎಲ್ಲಾ ದಿಕ್ಕುಗಳಿಂದ ತನಿಖೆ ನಡೆಸುತ್ತಿದ್ದೇವೆ’ ಎಂದು ಮಥುರಾ ಎಸ್‌ಪಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.