ADVERTISEMENT

ಲಸಿಕೆ ಪ್ರಯೋಗಕ್ಕೆ ಗಡುವು ಅಪಾಯಕಾರಿ ಎಂದ ಭಾರತದ ವಿಜ್ಞಾನಿಗಳು

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 19:31 IST
Last Updated 5 ಜುಲೈ 2020, 19:31 IST
ಲಸಿಕೆ – ಪ್ರಾತಿನಿಧಿಕ ಚಿತ್ರ
ಲಸಿಕೆ – ಪ್ರಾತಿನಿಧಿಕ ಚಿತ್ರ   

ನವದೆಹಲಿ:‘ಕೋವಿಡ್‌–19ಗೆ ಲಸಿಕೆ ಬಿಡುಗಡೆ ಮಾಡಲು 42 ದಿನಗಳ ಗಡುವು ನೀಡುವುದು ಅಪಾಯಕಾರಿ’ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ವ್ಯಾಕ್ಸಿನ್ ಕ್ಯಾಂಡಿಡೇಟ್ ‘ಕೋವ್ಯಾಕ್ಸಿನ್’ನ ‘ಕ್ಲಿನಿಕಲ್ ಟ್ರಯಲ್‌’ಗೆ ಭಾರತೀಯ ವೈದ್ಯಕೀಯ ಸಂಶೋಧನೆಗಳ ಪರಿಷತ್ತು ಗಡುವು ವಿಧಿಸಿದ್ದರ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸನ್ ಎಚ್ಚರಿಕೆ ನೀಡಿದೆ ಈ ಹೇಳಿಕೆ ನೀಡಿದೆ.ಈ ಸಂಬಂಧ ಅಕಾಡೆಮಿಯು ಬಹಿರಂಗ ಪತ್ರ ಬರೆದಿದೆ.

‘ಲಸಿಕೆ ಪ್ರಯೋಗಕ್ಕೆ ಸಂಬಂಧಿಸಿದ ವೈಜ್ಞಾನಿಕ ಪ್ರಕ್ರಿಯೆ ಮತ್ತು ಮಾರ್ಗಸೂಚಿಗಳಲ್ಲಿ ಆತುರ ತೋರುವುದು ತರವಲ್ಲ. ಆತುರ ತೋರಿದರೆ, ಅದು ಭಾರತದ ನಾಗರಿಕರ ಮೇಲೆ ಅನಿರೀಕ್ಷಿತಮಟ್ಟದ ಮತ್ತು ದೀರ್ಘಾವಧಿ ಪರಿಣಾಮಕ್ಕೆ ಕಾರಣವಾಗಬಹುದು’ ಎಂದು ಅಕಾಡೆಮಿಯು ಎಚ್ಚರಿಕೆ ನೀಡಿದೆ.

ADVERTISEMENT

‘ಲಸಿಕೆ ಪ್ರಯೋಗಕ್ಕೆ ಗಡುವು ನೀಡುವುದು ಕಾರ್ಯಸಾಧುವಲ್ಲ. ಈ ಗಡುವು ನೀಡಿದ ಕಾರಣ ಭಾರತೀಯರಲ್ಲಿ ಅಸ್ವಾಭಾವಿಕ ಭರವಸೆ ಮತ್ತು ನಿರೀಕ್ಷೆ ಹುಟ್ಟಿಕೊಂಡಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಸುಲಭಕ್ಕೆ ಮುಗಿಯುವುದಿಲ್ಲ ಕ್ಲಿನಿಕಲ್ ಟ್ರಯಲ್:ಸಂಭಾವ್ಯ ಲಸಿಕೆಯನ್ನು ಮೂರು ಹಂತದಲ್ಲಿ ‘ಕ್ಲಿನಿಕಲ್ ಟ್ರಯಲ್‌’ಗೆ ಒಳಪಡಿಸಲಾಗುತ್ತದೆ. ಮೊದಲ ಎರಡು ಹಂತಗಳಲ್ಲಿ ಆರೋಗ್ಯವಂತ ಸ್ವಯಂಸೇವಕರಿಗೆ ಮಾತ್ರ ಲಸಿಕೆಯನ್ನು ಪ್ರಾಯೋಗಿಕವಾಗಿ ನೀಡಲಾಗುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.

‘ಮೊದಲ ಹಂತದಲ್ಲಿ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳು ಆಗುವುದಿಲ್ಲ ಎಂಬುದು ಮತ್ತು ಯಾವುದೇ ಅಪಾಯ ಇಲ್ಲ ಎಂಬುದರ ಪ್ರಯೋಗ ನಡೆಸಲಾಗುತ್ತದೆ. ಅಡ್ಡಪರಿಣಾಮ ಮತ್ತು ಅಪಾಯ ಇಲ್ಲ ಎಂಬುದು ಸಾಬೀತಾದರೆ ಮಾತ್ರ, ಎರಡನೇ ಹಂತದ ಪ್ರಯೋಗ ಆರಂಭಿಸಲಾಗುತ್ತದೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಅಡ್ಡಪರಿಣಾಮ ಮತ್ತು ಅಪಾಯಗಳು ಇದ್ದರೆ ಪ್ರಯೋಗವನ್ನು ನಿಲ್ಲಿಸಲಾಗುತ್ತದೆ.ಮೊದಲ ಹಂತದ ಪ್ರಯೋಗ ಮುಗಿಯಲು ಹಲವು ವಾರಗಳ ಸಮಯ ಬೇಕಾಗುತ್ತದೆ. ಹೀಗಾಗಿ ಗಡುವು ಹಾಕಿಕೊಂಡು ಲಸಿಕೆ ಪ್ರಯೋಗ ನಡೆಸಲು ಸಾಧ್ಯವಿಲ್ಲ’ ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.